ತುಮಕೂರು: ಗುರುವಾರ ತುಮಕೂರಿನಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಮುಖವಾಡ ಬಯಲಾಗಿದೆ.
ಮರಳೂರು ದಿಣ್ಣೆಯ ನಿವಾಸಿ ಬಿಜೆಪಿ ದಲಿತ ಕಾರ್ಯಕರ್ತ ಮಧು ಎನ್ನುವವರ ಮನೆಯಲ್ಲಿ ತಟ್ಟೆ ಇಡ್ಲಿ, ಚಿತ್ರಾನ್ನ, ಕೇಸರಿ ಬಾತ್ನ್ನು ಹಲವು ನಾಯಕರು ಸೇವಿಸಿದ್ರು. ಹೋಟೆಲಿನಿಂದ ತಿಂಡಿಯನ್ನು ತಂದು ದಲಿತರ ಮನೆಯಲ್ಲಿ ಸೇವಿಸಿ, ದಲಿತರೆಂದರೇ ತಮಗೆ ಬೇಧವಿಲ್ಲ ಅಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು.
ಯಡಿಯೂರಪ್ಪ ಅವರಿಗೆ ನಮ್ಮ ಹೋಟೆಲ್ ಟೀ ಅಂದ್ರೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಟೀ ಕುಡಿದು ಹೋಗ್ತಾರೆ. ನಿನ್ನೆಯೂ ನಮ್ಮ ಹೋಟೆಲ್ ನಿಂದ 500 ಇಡ್ಲಿ, 500 ವಡೆ, ಚಿತ್ರಾನ್ನವನ್ನು ಕಳುಹಿಸಿದ್ದೇವೆ ಎಂದು ಹೋಟೆಲ್ ಮಾಲೀಕ ಶಿವಕುಮಾರ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ್, ಶೋಭಾಕರಂದ್ಲಾಜೆ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ದಲಿತರ ಮನೆ ಊಟ ಮಾಡಿದ್ದೇವೆ ಎಂದು ಬೀಗಿದ್ರು. ಆದ್ರೆ ಈಗ ಅದರ ಅಸಲಿಯತ್ತು ಅನಾವರಣಗೊಂಡಿದೆ.