ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಅಮಿತ್ ಶಾ ಸಹಿತ ಬಿಜೆಪಿ ನಾಯಕರಿಗೆ ಅಸಾಧ್ಯ – ಅವರಿಗೆ ಭಯವಿದೆ: ರಾಹುಲ್ ಗಾಂಧಿ

Public TV
2 Min Read

ಶ್ರೀನಗರ: ಜಮ್ಮು-ಕಾಶ್ಮೀರದ (Jammu and Kashmir) ಬೀದಿಗಳಲ್ಲಿ ನಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸಹಿತ ಯಾವುದೇ ಬಿಜೆಪಿ ನಾಯಕರಿಗೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಭಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.

ಶ್ರೀನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಸರಿಯಾದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದೆ ಎನ್ನುವುದಾದರೆ ಅಮಿತ್ ಶಾ ಜಮ್ಮುವಿನಿಂದ ಶ್ರೀನಗರದ ಲಾಲ್ ಚೌಕ್‍ವರೆಗೆ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಅಲ್ಲ. ದೇಶದ ಹಿತಕ್ಕಾಗಿ ಮಾಡಿದ ಯಾತ್ರೆ ಇದು. ದೇಶದ ಅನೇಕತೆ, ಜಾತ್ಯಾತೀತತೆಯನ್ನು ಉಳಿಸಲು ಈ ಯಾತ್ರೆ ಕೈಗೊಂಡೆ. ಪ್ರಜೆಗಳಿಂದ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಕಂಡು ನನ್ನ ಕಣ್ಣಲ್ಲಿ ನೀರು ಬಂದಿದೆ. ಒಂದು ಹಂತದಲ್ಲಿ ಜೋಡೋ ಯಾತ್ರೆ ಪೂರ್ಣಗೊಳಿಸುವೆನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಮಳೆ, ಚಳಿ ಲೆಕ್ಕಿಸದೇ ಪ್ರಜೆಗಳು ಬಂದಿದ್ದಾರೆ. ಈ ಯಾತ್ರೆಯುದ್ದಕ್ಕೂ ನಾನು ಅನೇಕ ಪಾಠಗಳನ್ನು ಕಲಿತೆ. ಜನರ ದೀನಸ್ಥಿತಿ ಕಂಡು ಟೀಶರ್ಟ್‍ನಲ್ಲೇ ಯಾತ್ರೆ ಮಾಡಲು ನಿರ್ಣಯಿಸಿದೆ ಎಂದು ಹೇಳಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿವೆ. ಜನ ಪ್ರತಿನಿತ್ಯ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಕೇಂದ್ರ ಸರ್ಕಾರ ನಮ್ಮ ಯಾತ್ರೆಗೆ ಸೂಕ್ತ ಭದ್ರತೆ ನೀಡಲಿಲ್ಲ. ಆದರೆ ಈ ಬಗ್ಗೆ ಹೇಳಿದಾಗ ಬಿಜೆಪಿಯವರು ಆಧಾರರಹಿತ ಆರೋಪ ಎನ್ನುತ್ತಾರೆ. ಆದರೆ ಕಾಶ್ಮೀರದಲ್ಲಿ ಯಾವೊಬ್ಬ ಬಿಜೆಪಿ ನಾಯಕನೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ನಾವು ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಬೀದಿಗಳಲ್ಲಿ ನಡೆದಿದ್ದೇವೆ. ನಮಗೆ ಯಾವುದೇ ತೊಂದರೆ ಆಗಿಲ್ಲ. ನಮ್ಮಂತೆ ಯಾವುದೇ ಬಿಜೆಪಿ ನಾಯಕನೂ ಇಲ್ಲಿ ಈ ರೀತಿ ನಡೆಯಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಭಯವಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ ಮತ್ತು ಆರ್‌ಎಸ್‌ಎಸ್‌ (RSS) ಇಲ್ಲಿನ ಹಿಂಸಾಚಾರವನ್ನು ನೋಡಿಲ್ಲ. ಇಲ್ಲಿನ ಜನರ ನರಕಯಾತನೆ ಅವರಿಗೆ ಅರಿವಾಗಿಲ್ಲ ಎಂದು ಟೀಕಿಸಿದ್ದಾರೆ.

ಬರೋಬ್ಬರಿ 136 ದಿನಗಳ ಕಾಲ, 4,084 ಕಿಲೋಮೀಟರ್ ಉದ್ದ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇಂದು ಸಮಾಪ್ತಿಗೊಂಡಿದೆ. ಭಾರೀ ಹಿಮಪಾತ, ಕೊರೆವ ಚಳಿ ನಡುವೆ ಶ್ರೀನಗರದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಲಾಲ್‍ಚೌಕ್‍ನಲ್ಲಿ ಇಂದು ಕೂಡ ತ್ರಿವರ್ಣ ಧ್ವಜವನ್ನು ರಾಹುಲ್ ಗಾಂಧಿ ಹಾರಿಸಿದ್ರು. ಸಮಾರೋಪದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾದ್ರಾ, ಡಿ.ಕೆ ಶಿವಕುಮಾರ್, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಹಲವರು ಪಾಲ್ಗೊಂಡಿದ್ರು. ಒಟ್ಟು 21 ಪಕ್ಷಗಳನ್ನು ಈ ಸಮಾರಂಭಕ್ಕೆ ಕಾಂಗ್ರೆಸ್ ಆಹ್ವಾನಿಸಿತ್ತು. ಬಹುತೇಕ ಪಕ್ಷಗಳು ಭದ್ರತಾ ಕಾರಣಗಳಿಂದ ಈ ಸಮಾರೋಪಕ್ಕೆ ಹಾಜರಾಗಲಿಲ್ಲ. ಹಿಮಪಾತದ ಕಾರಣ ವಿಮಾನಗಳ ಹಾರಾಟ ಬಂದ್ ಆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸೇರಿ ಅನೇಕರು ದೆಹಲಿಯಲ್ಲೇ ಉಳಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *