ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

Public TV
1 Min Read

ಶ್ರೀನಗರ: ಶನಿವಾರ ಮೂರು ಜನ ಶಂಕಿತ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಬಿಜೆಪಿ ಹಿರಿಯ ಮುಖಂಡ ಗುಲ್ ಮಹಮ್ಮದ್ ಮಿರ್ ಬಲಿಯಾಗಿದ್ದಾರೆ.

ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮಹಮ್ಮದ್ ಮಿರ್ ಅವರನ್ನು ಕಾರು ಕೀ ಕೇಳುವ ನೆಪದಲ್ಲಿ ಮನೆಗೆ ಬಂದ 3 ಜನ ಶಂಕಿತ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಎದೆಗೆ ಗುಂಡು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಾಶ್ಮೀರದಲ್ಲಿ “ಅಟಲ್” ಎಂದೆ ಖ್ಯಾತಿಯಾಗಿದ್ದ ಗುಲ್ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಅದರೆ ಕೆಲವು ದಿನಗಳ ಹಿಂದೆ ಅವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೇತೃತ್ವದ ರಾಜ್ಯ ಆಡಳಿತ ಹಿಂಪಡೆದಿತ್ತು. ಹೀಗೆ ಹಿಂಪಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು ರಾಜ್ಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಗುಲ್ ಮಹಮ್ಮದ್ ಕುಟುಂಬದವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುತ್ತಿರುವ ಮತ್ತು ಮುಗ್ಧ ಜನರನ್ನು ಕೊಲ್ಲುತಿರುವ ಉಗ್ರರನ್ನು ಹತ್ಯೆಮಾಡಬೇಕು ಎಂದು ಅಗ್ರಹಿಸಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಪ್ರಧಾನಿ ಮೋದಿ ಅವರು, ಹಿರಿಯ ಬಿಜೆಪಿ ನಾಯಕನ ಕೊಲೆಯನ್ನು ಖಂಡಿಸಿದ್ದಾರೆ. ಇಂತಹ ಹಿಂಸೆಗೆ ನಮ್ಮ ದೇಶದಲ್ಲಿ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮಫ್ತಿಯವರು ಹಿರಿಯ ಬಿಜೆಪಿ ಮುಖಂಡ ಗುಲ್ ಮಹಮ್ಮದ್ ಮಿರ್ ಅವರ ಹತ್ಯೆಯನ್ನು ನಾನು ಖಂಡಿಸುತ್ತೇನೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *