ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

Public TV
3 Min Read

– ಬಿಜೆಪಿ ಪಕ್ಷ ಸಂಘಟನೆಗಾಗಿ ಚುನಾವಣೆ ಮುಂದೂಡುತ್ತಿದೆ

ಯಾದಗಿರಿ: ಅಪರೇಷನ್ ಕಮಲ ಬಿಜೆಪಿಯ (BJP) ಹುಟ್ಟುಗುಣ. ದೇಶದಲ್ಲಿ ಆಪರೇಷನ್ ಮಾಡಿರುವ ಸಂಖ್ಯೆಯ ಲೆಕ್ಕ ತೆಗೆದರೆ ಬಿಜೆಪಿ ಗಿನ್ನಿಸ್ ರೆಕಾರ್ಡ್ ಆಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಯಾದಗಿರಿಯ (Yadagiri) ಗುರುಮಠಕಲ್‍ನಲ್ಲಿ ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ಕ್ಷೇತ್ರ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ವಿರೋಧ ಪಕ್ಷದ ನಾಯಕರು, ಸಿಎಂ ಆಗಿದ್ದವರು. 224 ಕ್ಷೇತ್ರದಲ್ಲಿ ರೋಡ್ ಶೋ, ಸಭೆ ಮಾಡುತ್ತಾರೆ. ಈಗ ಅವರ ಮೇಲೆ ಅನುಕಂಪ ತೋರಿಸಬೇಡಿ. ನಿಮ್ಮ ಅನುಕಂಪ ನಮಗೆ ಬೇಡ ಎಂದು ಡಿಕೆ ಶಿವಕುಮಾರ್ ಹೇಳಿದ್ದು ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ

ರಾಜಕಾರಣಿಗಳಿಗೆ ಸೋಲು ಗೆಲುವು ಎನ್ನುವುದು ಎಲ್ಲರಿಗೂ ಆಗಿದೆ. ಸಿದ್ದರಾಮಯ್ಯ ಎರಡು-ಮೂರು ಬಾರಿ ಸೋತಿದ್ದಾರೆ. ನಾನು ಸಹ ಎರಡರಿಂದ ಮೂರು ಸಲ ಸೋತಿದ್ದೇನೆ. ಸೋಲು ಗೆಲುವು ಜನರ ಕೈಯಲ್ಲಿದೆ. ಜನ ಬೇಕಾದಾಗ ಆಯ್ಕೆ ಮಾಡುತ್ತಾರೆ. ಬೇಡ ಎಂದಾದರೆ ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರದಿಂದ ಹಿಂದೆಂದೂ ಕಾಣದ ಜಾಹಿರಾತುಗಳು ಪ್ರತಿನಿತ್ಯ ಬರುತ್ತಿವೆ. ಜಾಹಿರಾತಿಗೆ ಕೊಟ್ಟ ಆಸಕ್ತಿಯನ್ನು ಕೆಲಸದ ವಿಚಾರದಲ್ಲಿ ತೋರಿಸಬೇಕಾಗಿತ್ತು. ಇದರಿಂದ ರಾಜ್ಯದಲ್ಲಿ ಸ್ವಲ್ಪ ಜನರ ವಿಶ್ವಾಸವಾದರೂ ಗಳಿಸಬಹುದಿತ್ತು. ಈ ಜಾಹಿರಾತುಗಳಿಂದ ಜನತೆಯ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದಿದ್ದಾರೆ.

ಇಂದು ರಾಜ್ಯಕ್ಕೆ ಅಮಿತ್ ಶಾ (Amit Shah) ಬಂದಿದ್ದಾರೆ. ಚುನಾವಣೆ ಸಮೀಪದಲ್ಲಿ ಪ್ರತಿನಿತ್ಯ ಕೇಂದ್ರ ಸಚಿವರು ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಇಂತಹ ಹೊಸ ಪದ್ಧತಿಯನ್ನು ಬಿಜೆಪಿ ಪಕ್ಷ ಪ್ರಾರಂಭ ಮಾಡಿದೆ. ಸಾಧನೆ ಹೇಳಿಕೊಳ್ಳಲು ಕೆಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ರಾಜ್ಯಕ್ಕೆ ದೊರಕಿಲ್ಲ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಸಣ್ಣ ಸಣ್ಣ ಯೋಜನೆಗಳನ್ನು ಉದ್ಘಾಟನೆ ಮಾಡಲು ಕೇಂದ್ರ ಸಚಿವರು ಬರುತ್ತಿದ್ದಾರೆ. ವಿಶ್ವದಲ್ಲಿಯೇ ನಂಬರ್ ಒನ್ ಪಕ್ಷವೆಂದು ಬಿಂಬಿಸಿಕೊಂಡವರಿಗೆ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇದರಿಂದ ಅಯ್ಯೋ ಎನಿಸಿ ಅನುಕಂಪ ಹುಟ್ಟುತ್ತಿದೆ ಎಂದು ಕುಟುಕಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಕಡೆ ವಲಸೆ ಆರಂಭವಾಗಿದೆ. ಇಲ್ಲಿಯವರೆಗೆ ಕಾಂಗ್ರೆಸ್‍ನಿಂದ (Congress) ಬಿಜೆಪಿ ಕಡೆ ವಲಸೆ ಆಗುತ್ತಿತ್ತು. ಮತ್ತೆ ಚುನಾವಣೆ ಬಳಿಕ ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ. ಕಾಂಗ್ರೆಸ್ ಚುನಾವಣೆಗೂ ಪೂರ್ವದಲ್ಲೇ ಆಪರೇಷನ್ ಹಸ್ತ ಮಾಡ್ತಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಆಪರೇಷನ್ ಮಾಡಲಾಗಿದೆ ಎಂದು ಎಂದು ಚಿಂಚನಸೂರ ವಿರುದ್ಧ ಕಿಡಿಕಾರಿದ್ದಾರೆ.

ಎಐಸಿಸಿ ಅಧ್ಯಕ್ಷರ ವಿರುದ್ಧ ತೊಡೆ ತಟ್ಟಿದವರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್‍ಗೆ ಬರಬಾರದು. ಇದರಿಂದ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಎಂದು ಗೊತ್ತಾಗುತ್ತದೆ. ಕಾಂಗ್ರೆಸ್‍ನವರು ತಮಗೆ ಮೋಸ ಮಾಡಿದವರನ್ನು ಮತ್ತೆ ತಬ್ಬಿಕೊಂಡಿದ್ದಾರೆ. 15 ದಿನಗಳ ಕಾಲ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗುತ್ತಾರೆ ಎಂದಿದ್ದಾರೆ.

ನೀತಿ ಸಂಹಿತೆ ಜಾರಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸಂಘಟನೆ ಆಗಬೇಕು. ಅದಕ್ಕೆ ನೀತಿ ಸಂಹಿತೆ ಇನ್ನೂ ಜಾರಿ ಮಾಡಿಲ್ಲ. ಪಕ್ಷ ಸಂಘಟನೆ ಆಗಿದೆ ಎಂದು ಖಾತ್ರಿಯಾಗುವವರೆಗೂ ಚುನಾವಣೆ ಮುಂದಕ್ಕೆ ತಳ್ಳುತ್ತಾರೆ. ಮೋದಿಯವರ (Narendra Modi) ಕಾರ್ಯಕ್ರಮಗಳು ಮುಗಿದ ಮೇಲೆಯೇ ನೀತಿ ಸಂಹಿತೆ ಜಾರಿ ಮಾಡುತ್ತದೆ. ಸಂವಿಧಾನಿಕ ಸಂಸ್ಥೆಗಳು ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಮಟ್ಟದಲ್ಲಿ ಈ ರೀತಿ ನಡೆಯುತ್ತಿದೆ. ಅವರ ಮನಸ್ಸಿಗೆ ಬಂದಂತೆ ಚುನಾವಣೆ ನಿರ್ಧಾರ ಮಾಡುತ್ತಾರೆ ಎಂದು ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾಲ್ಕು ವರ್ಷ ಬಿಜೆಪಿ ಸರ್ಕಾರ ಕೆಲಸ ಮಾಡದೇ ಈಗ ಸಮುದಾಯಗಳಿಗೆ ನಿಗಮಗಳನ್ನು ನೀಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ನಿಗಮ ಮಾಡಿ ಆರ್ಥಿಕವಾಗಿ ಶಕ್ತಿ ತುಂಬಿದ್ದರೆ ಒಪ್ಪಬಹುದಿತ್ತು. ಚುನಾವಣೆಗೆ ಹೋಗುವ ಮುನ್ನ ಪ್ರಾಧಿಕಾರ ಮಾಡಿ ಪ್ರಯೋಜನವೇನು ಎಂದು ಬಿಜೆಪಿ ನಾಯಕರಿಗೆ ಕುಟುಕಿದ್ದಾರೆ.

ರಾಹುಲ್ ಗಾಂಧಿಯವರಿಗೆ (Rahul Gandhi) ಶಿಕ್ಷೆ ಪ್ರಕಟವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಯಾರೆಲ್ಲ ಏನೇನು ಪದ ಬಳಕೆ ಮಾಡಿದ್ದಾರೆ ಎಂಬುದು ಗೊತ್ತಿದೆ. ರಾಜೀವ್ ಗಾಂಧಿ (Rajiv Gandhi) ಅವರನ್ನು ಚೋರ್ ಎಂದು ಕರೆದಾಗ ಅರೆಸ್ಟ್ ಆಗಿತ್ತಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 12 ಗಂಟೆಗೊಮ್ಮೆ ಸ್ಥಳ ಬದಲಾವಣೆ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಮೃತ್‌ಪಾಲ್ ಸಿಂಗ್

Share This Article
Leave a Comment

Leave a Reply

Your email address will not be published. Required fields are marked *