ಚಿದಂಬರಂ ಬಂಧನದ ಹಿಂದೆ ರಾಜಕೀಯ ದ್ವೇಷವಿಲ್ಲ: ನಿರ್ಮಲಾ ಸೀತಾರಾಮನ್

Public TV
1 Min Read

– ತೆರಿಗೆ ಅಧಿಕಾರಿ ಜೊತೆಗೆ ಮುಖಾಮುಖಿ ಇಲ್ಲ

ಮೈಸೂರು: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಬಂಧನದ ಹಿಂದೆ ರಾಜಕೀಯ ದ್ವೇಷವಿಲ್ಲ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ನಿರಾಧಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಿಬಿಐ ಎಲ್ಲಾ ಮಾಹಿತಿ ಕಲೆ ಹಾಕುವವರೆಗೂ ಸುಮ್ಮನಿರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ರೀತಿ ಬಳಸಿಕೊಂಡಿತ್ತು ಎಂದು ನೆನಪು ಮಾಡಿಕೊಳ್ಳಲಿ ಎಂದು ಗುಡುಗಿದರು.

ಇದೇ ವೇಳೆ ಜಿಎಸ್‍ಟಿ ಹಾಗೂ ಇತರೆ ತೆರಿಗೆ ವಿಚಾರವಾಗಿ ಮಾತನಾಡಿದ ಅವರು, ಈ ಸಂಬಂಧ ಮೂರನೇ ಸಭೆ ನಡೆಸಿದ್ದೇನೆ. ಗುಜರಾತ್, ವಾರಣಾಸಿ ನಂತರ ಮೂರನೇ ಸಭೆ ಮೈಸೂರಿನಲ್ಲಿ ನಡೆಸಿದ್ದೇನೆ. ಈ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳಿಂದ ಅಭಿಪ್ರಾಯ ಹಾಗೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ ಎಂದರು.

ತೆರಿಗೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮುಖಾಮುಖಿ ರಹಿತವಾಗಿ ನಡೆಯಬೇಕು. ಈ ವ್ಯವಸ್ಥೆಯನ್ನು ವಿಜಯದಶಮಿ ದಿನದಂದು ಪೂರ್ಣಪ್ರಮಾಣದಲ್ಲಿ ಚಾಲನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಂರ್ಪಕವಾಗಿ ಬಳಸಿಕೊಳ್ಳಾಗುತ್ತಿದೆ. ಈ ಮೂಲಕ ಎಲ್ಲ ರೀತಿಯ ತೆಗರಿಗೆ ವಿವರಗಳ ಪರಿಶೀಲನೆ ಆನ್‍ಲೈನ್ ಮೂಲಕವೇ ನಡೆಯಲಿದೆ. ಇದರಿಂದಾಗಿ ಸಿಬ್ಬಂದಿ ಹಾಗೂ ತೆರಿಗೆದಾರರು ಒತ್ತಡ ರಹಿತವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ತೆರಿಗೆ ಸಂಗ್ರಹದ ವಾರ್ಷಿಕ ಗುರಿಗೆ ತೊಂದರೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *