ಕಾಂಗ್ರೆಸ್ ಸೋಲಿಸಲು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ: ದಿನೇಶ್ ಗುಂಡೂರಾವ್

Public TV
2 Min Read

– ಡಿಕೆಶಿ ಜೈಲಿಂದ ಹೊರಗೆ ಬಂದಿರೋದು ನಮಗೆ ಬಲ ಬಂದಿದೆ

ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಧಾರವಾಡ ಜಿಲ್ಲೆ ಕುಂದಗೋಳ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಅಂಚಟಗೇರಿ, ಚನ್ನಪುರ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಸಂತ್ರಸ್ತರಿಗೆ ದಿನೇಶ್ ಗುಂಡೂರಾವ್ ಪರಿಹಾರ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಅವರಿಗೆ ಕುಂದಗೋಳ ಕೈ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ಕೊಟ್ಟರು. ಬಳಿಕ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು. ಕಾಂಗ್ರೆಸ್ ಧೂಳಿಪಟ ಆಗುತ್ತೆ ಎಂದು ಹೇಳಿದ್ದರು. ಆದ್ರೆ ಹರ್ಯಾಣದಲ್ಲಿ ಇನ್ನು ಯಾರು ಸರ್ಕಾರ ರಚನೆ ಮಾಡುತ್ತಾರೆ ಎನ್ನೋದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡೋಕೆ ಪ್ರಯತ್ನ ಮಾಡಿದ್ದರು. ಆದ್ರೆ ಅದು ಸಾಧ್ಯವಿಲ್ಲ, ಅದಕ್ಕೆ ಉದಾಹರಣೆ ಇಂದಿನ ರಿಸಲ್ಟ್ ಎಂದು ವಾಗ್ದಾಳಿ ನಡೆಸಿದರು.

ಎರಡೂ ರಾಜ್ಯಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹೆಚ್ಚು ರ್ಯಾಲಿ ಮಾಡಿದ್ದಾರೆ. ಆದರೆ ಜನ ಅವರಿಂದ ನಿರಾಶರಾಗಿದ್ದಾರೆ ಎನ್ನೋದು ಗೊತ್ತಾಗಿದೆ. ಎಲ್ಲಾ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಂಡರು, ಹೀಗಾಗಿ ಅವರಿಗೆ ಜನ ಸರಿಯಾಗಿ ಸ್ಪಂದಿಸಿಲ್ಲ. ಇದೆಲ್ಲಾ ನೋಡಿದರೆ ನಾವು ಇನ್ನಷ್ಟು ಗಟ್ಟಿಯಾಗಬೇಕಿದೆ, ನಾವು ಪಕ್ಷವನ್ನ ಇನ್ನಷ್ಟು ಸದೃಡ ಮಾಡಬೇಕೆಂದು ಹೇಳಿದರು.

ರಾಜ್ಯದಲ್ಲೂ ಕೂಡಾ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ದೀಪಾವಳಿ ನಂತರ ಪಾದಯಾತ್ರೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ನೆರೆ ಪೀಡಿತರಿಗೆ ಇನ್ನೂ ಒಂದು ಪೈಸೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯವನ್ನ ಕಡೆಗಣಿಸಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನ ಎಬ್ಬಿಸಲು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ಉಪಚುನಾವಣೆ ಬಗ್ಗೆ ಮಾತನಾಡಿ, ಉಪಚುನಾವಣೆ ಬೇಗ ಆಗಬೇಕೆಂಬುದೇ ನಮ್ಮ ಆಶಯ. ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ತೀರ್ಮಾನ ಮಾಡುತ್ತೆ ನೋಡಬೇಕು. ಡಿಕೆಶಿ ಜೈಲಿಂದ ಹೊರಗೆ ಬಂದಿರೋದು ನಮಗೆ ಬಲ ಬಂದಿದೆ. ಬಿಜೆಪಿಯವರ ರಾಜಕೀಯ ಸಂಚಿಗೆ ಡಿಕೆಶಿ ಬಲಿಯಾಗಿಲ್ಲ. ಹೀಗಾಗಿ ಅವರ ಮೇಲೆ ಐಟಿ, ಇಡಿ ದಾಳಿ ಮಾಡಿಸಿದರು ಎಂದು ಕಿಡಿಕಾರಿದರು.

ಇದೇ ವೇಳೆ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾನು, ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಎಲ್ಲಾ ಒಗ್ಗಟ್ಟಾಗಿ ಪಕ್ಷಕ್ಕೆ ಬಂದ ಕಷ್ಟಗಳನ್ನು ಎದುರಿಸುತ್ತೇವೆಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *