ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

Public TV
1 Min Read

ತುಮಕೂರು: ಗುಡಿಸಲು ಮುಕ್ತ ಯೋಜನೆ ರೂಪಿಸಲು ಊರಿಗೆ ಬಂದ ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಿರ್ಬಂಧ ಹಾಕಲಾಗಿತ್ತು.

ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿ ಒಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡಿದ್ದಾರೆ.

ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಕ್ಕೆ ಬಿಟ್ಟುಕೊಳ್ಳಲೇ ಇಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗೋದು ಬೇಡ ಎಂದು ನಾರಾಯಣಸ್ವಾಮಿಗೆ ಸಮಾಧಾನಪಡಿಸಿದ್ದಾರೆ.

ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತಂತೆ. ಅಲ್ಲಿಂದ ಇಲ್ಲಿವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಕಥೆ ಹೇಳಿದ್ದಾರೆ. ಇಷ್ಟೆಲ್ಲಾ ಅವಮಾನಗಳನ್ನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಕಾರಿನಲ್ಲೇ ಕುಳಿತುಕೊಂಡರು.

ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ಮರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *