ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

Public TV
2 Min Read

ಲಕ್ನೊ: ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ಪಡೆಯ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ಮೈನ್‍ಪುರಿ ಜಿಲ್ಲೆಯ ಕರ್ಹಾಲ್‍ನಲ್ಲಿ ದಾಳಿ ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ.

ಮೈನ್‍ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ನಡೆಸಿದ ದಾಳಿಯು ಪಕ್ಷದ ನೈಜ ಸ್ವರೂಪವನ್ನು ತೋರಿಸುತ್ತದೆ ಎಂದು ಹಿಂದಿಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಿನ್ನೆ ಬಿಜೆಪಿ ಸಂಸದೆ ಗೀತಾ ಶಾಕ್ಯಾ ಅವರ ಮೇಲೂ ಹಲ್ಲೆ ನಡೆದಿದೆ. ಎರಡೂ ಘಟನೆಗಳ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಖಿಲೇಶ್ ಯಾದವ್ ಅವರು ತಮ್ಮ ಭದ್ರಕೋಟೆಯಾದ ಕರ್ಹಾಲ್‍ನಲ್ಲಿ ಸೋಲುವ ಭಯದಿಂದ ಎಸ್‍ಪಿ ಸಿಂಗ್ ಬಘೇಲ್ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಅವರ ಮುದ್ದಿನ ಗೂಂಡಾಗಳಿಂದ ದಾಳಿ ನಡೆಸಿದ್ದಾರೆ. ದಾಳಿ ಮಾಡಿರುವುದರಿಂದ ನಿಮ್ಮ ಸೋಲನ್ನು ನೀವು ಖಚಿತಪಡಿಸಿಕೊಂಡಿದ್ದೀರಿ. ಇದು ಹೊಸ ಸಮಾಜವಾದಿ ಪಕ್ಷವೇ? ನಿಮ್ಮ ವಿರುದ್ಧ ಸ್ಪರ್ಧಿಸುವವರ ಮೇಲೆ ದಾಳಿ ನಡೆಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ದನ್ನೂ ಓದಿ: ಟರ್ಬನ್ ಧರಿಸಿದವರೆಲ್ಲಾ ‘ಸರ್ದಾರ್’ ಆಗೋದಿಲ್ಲ: ಪ್ರಿಯಾಂಕಾ ಗಾಂಧಿ

ಇನ್ನೂ ಈ ಘಟನೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಬಾಘೇಲ್ ಮೇಲಿನ ದಾಳಿಯು ಅಖಿಲೇಶ್ ಯಾದವ್ ಸೋಲಿನ ರುಚಿಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಜನರ ಆಶೀರ್ವಾದದಿಂದ ಖಚಿತವಾಗಿದೆಯೇ ಹೊರತು ಗೂಂಡಾಗಳ ಭಯೋತ್ಪಾದನೆಯಿಂದಲ್ಲ ಎಂದು ಟಾಂಗ್ ನೀಡಿದ್ದಾರೆ.

ಘಟನೆ ಕುರಿತಂತೆ ಮೈನ್‍ಪುರಿ ಪೊಲೀಸರು ಸಹ ಟ್ವೀಟ್‍ನಲ್ಲಿ, ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕರ್ಹಾಲ್‍ನ ಎಸ್‍ಎಚ್‍ಒಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ. ದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

Share This Article
Leave a Comment

Leave a Reply

Your email address will not be published. Required fields are marked *