ಬಿಜೆಪಿಯವರು ಜನರಿಗೆ ಹೀಗೆ ಮೋಸ ಮಾಡ್ತಾಯಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Public TV
2 Min Read

ಬೆಂಗಳೂರು: ನಾವು ಮಾಡಿದ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಹೊಸ ಹೆಸರು. ಇದು ಬಿಜೆಪಿಯವರಿಂದ ಜನರಿಗೆ ಆಗ್ತಿರುವ ಮೋಸ. ಇವರಿಗೆ 40 ತಿಂಗಳಲ್ಲಿ ಒಂದು ಸಣ್ಣ ರೈಲು ನಡೆಸುವುದಕ್ಕಾಗಲ್ಲ. ಇವರ ಅವಧಿಯಲ್ಲಿ 27 ರೈಲು ದುರಂತಗಳು ಜರುಗಿವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಕೆಪಿಸಿಸಿ, ಒಬಿಸಿ ಘಟಕದ ವತಿಯಿಂದ ಪುರಭವನದಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬುಲೆಟ್ ರೈಲು ತರುತ್ತವೆ ಅಂತಿದ್ದಾರೆ. ಮೊದಲು ರೈಲ್ವೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ. ಅದು ಬುಲೆಟ್ ಟ್ರೈನ್ ತರ್ತಿರೋದು  ಕಾರ್ಪೋರೇಟ್  ಕುಳಗಳಿಗಾಗಿ ಜನರಿಗಾಗಿಯಲ್ಲ ಎಂದರು.

500 ಕಿ.ಮೀ ಬುಲೆಟ್ ಟ್ರೈನ್ 1 ಲಕ್ಷ ಕೋಟಿ ರೂ. ಖರ್ಚು ಮಾಡ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್‍ಗೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಕ್ಲಬ್‍ಗಳಿಗೆ ಬಿಜೆಪಿಯವರು ಯಾಕೆ ವಿರೋಧಿಸ್ತಿಲ್ಲ. ಅದು ಸರ್ಕಾರಿ ಜಾಗದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ ಎಂದು ಹೇಳಿದರು.

ಬಿಜೆಪಿಯವ್ರು ಮೀಸಲಾತಿಯನ್ನ ರದ್ದು ಮಾಡಲು ಯೋಚಿಸ್ತಿದ್ದಾರೆ. ಮೋದಿ ಅವರಿಗೆ ಅಧಿಕಾರ ಕೊಟ್ರೆ ಡಿಕ್ಟೇಟರ್ ಶಿಪ್ ಬರುತ್ತೆ. ಮೋದಿ ಆಡಳಿತದಿಂದ ಪ್ರಜಾಪ್ರಭುತ್ವ ಬರಲ್ಲ. ಯುವಜನ ಇದನ್ನು ಮನಗಾಣಬೇಕು. ಈ ದೇಶದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಆದರೆ ಈ ದೇಶ ಉಳಿಯಬೇಕಾದರೆ ಕಾಂಗ್ರೆಸ್ ಆಡಳಿತ ಬರಬೇಕು. ಗೋರಕ್ಷಣೆ ಹೆಸರಲ್ಲಿ ಗೋರಕ್ಷಕರು ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ. ಹಾಲು ಕೊಂಡೊಯ್ಯುವರ ಮೇಲೂ ಗೋರಕ್ಷಕರಿಂದ ಹಲ್ಲೆ ಆಗ್ತಿದೆ. ಹಿಂದೂಸ್ತಾನವಾಗಿಯೇ ಉಳಿಸಿ ಹಿಂಸೆಯ ಸ್ಥಾನ ಮಾಡಬೇಡಿ ಎಂದರು.

ರಾಜೀವ್ ಗಾಂಧಿ ಯುವ ಸಮೂಹಕ್ಕೆ ರಾಜಕೀಯದಲ್ಲಿ ಅವಕಾಶ ಕೊಡಬೇಕೆಂದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಅವರು 18 ವರ್ಷಕ್ಕೆ ಮತದಾನಕ್ಕೆ ಅವಕಾಶ ಕೊಟ್ರು. ಹಾಗೆ ಅಧಿಕಾರ ವಿಕೇಂದ್ರಿಕರಣಕ್ಕೆ ಸಹ ಅವಕಾಶ ಮಾಡಿಕೊಟ್ಟಿದ್ದಾರೆ. ಮೊಬೈಲ್, ಕಂಪ್ಯೂಟರ್ ಪರಿಚಯ ಮಾಡಿದಾಗ ತುಂಬಾ ಜನ ವಿರೋಧಿಸಿದರು. ಆದರೆ ಅವತ್ತು ಟೀಕೆ ಮಾಡಿದವರೇ ಇವತ್ತು ನಾಲ್ಕು ನಾಲ್ಕು ಮೊಬೈಲ್ ಇಟ್ಕೊಂಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸಾಧಕರಿಗೆ ಅರಸು ಗೌರವ ಪುರಸ್ಕಾರವನ್ನು ನೀಡಲಾಯಿತು. ಸಾಹಿತಿ ಚನ್ನಣ್ಣ ವಾಲೀಕಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ವೇದಾ ಕೃಷ್ಣಮೂರ್ತಿಗೆ ಗೌರವ ಪುರಸ್ಕಾರ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಂಸದರಾದ ಮುನಿಯಪ್ಪ, ಸಚಿವ ಕೆ ಜೆ ಜಾರ್ಜ್, ಎಂಎಲ್‍ಸಿ ಬೋಸ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *