ಎಂ.ಬಿ.ಪಾಟೀಲ್ ಮೂಲಕವೇ ಕಾಂಗ್ರೆಸ್ ಸೇರ್ತಾರಾ ಬಿದರಿ?

Public TV
1 Min Read

ಬೆಂಗಳೂರು: ತುಮಕೂರು ಸಿದ್ದಗಂಗಾ ಶ್ರೀಗಳ ಭೇಟಿ ವೇಳೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಜೊತೆ ಕಾಣಿಸಿಕೊಂಡಿದ್ದಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮೇಲೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಅಷ್ಟೇ ಅಲ್ಲದೇ ಎಂಬಿ ಪಾಟೀಲ್ ಮೂಲಕವೇ ಮತ್ತೆ ಕಾಂಗ್ರೆಸ್ ಸೇರುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಎಂ.ಬಿ ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳು ಬೆಂಬಲ ನೀಡಿದ್ದಾರೆ ಎಂದು ಹೇಳಿ ಸುದ್ದಿಗೋಷ್ಠಿ ನಡೆಸಿದ್ದರು. ಈ ಹೇಳಿಕೆ ನಂತರ ಸಿದ್ದಗಂಗಾ ಶ್ರೀಗಳು ಪ್ರತ್ಯೇಕ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆ ಮಾಡಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದರು.

ಈ ಹೇಳಿಕೆಯಿಂದಾಗಿ ಎಂಬಿ ಪಾಟೀಲ್ ಮತ್ತು ಕಾಂಗ್ರೆಸ್ ಪಕ್ಷ ಮುಜುಗರಕ್ಕೆ ಈಡಾಗಿತ್ತು. ಈ ಮುಜುಗರವನ್ನು ತಪ್ಪಿಸುವ ಸಲುವಾಗಿ ಗುರುವಾರ ಎಂಬಿ ಪಾಟೀಲ್ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ್ದರು.

ಭೇಟಿ ಕಾರ್ಯಕ್ರಮದ ವೇಳೆ ಶಂಕರ್ ಬಿದರಿ ಸಹ ಎಂಬಿ ಪಾಟೀಲ್ ಜೊತೆ ತೆರಳಿದ್ದರು. ಎಂಬಿ ಪಾಟೀಲ್ ಜೊತೆ ತೆರಳಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಗರಂ ಆಗಿ ತರಾಟಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕರಿಗೆ ಇಲ್ಲದ ಆಸಕ್ತಿ ನಿಮಗೆ ಯಾಕೆ? ಮಧ್ಯಸ್ಥಿಕೆಗೆ ವಹಿಸಲು ನೀವು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿ ಇಬ್ಬರು ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಂಕರ್ ಬಿದರಿ ನಂತರ ಸಮಾಜವಾದಿ ಪಕ್ಷವನ್ನು ಸೇರಿದ್ದರು. ಬಳಿಕ 2014ರಲ್ಲಿ ಬಿದರಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎಂಬಿ ಪಾಟೀಲ್ ಜೊತೆಗೆ ಗುರುತಿಸಿಕೊಂಡ ಕಾರಣ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

https://youtu.be/iU1qcrqs3b4

Share This Article
Leave a Comment

Leave a Reply

Your email address will not be published. Required fields are marked *