ಚಿಕ್ಕಮಗಳೂರು: ಬಿಜೆಪಿ ನಾಯಕರೇ ನಿಮ್ಮನ್ನು ಗೆಲ್ಲಿಸೋದು ಗೊತ್ತು. ಸೋಲಿಸೋದು ಗೊತ್ತು. ನೀವು ಸರಿಯಾಗಿ ನಡೆದರೆ ಬೆನ್ನು ತಟ್ಟೋದು ಗೊತ್ತು. ದಾರಿ ತಪ್ಪಿದರೆ ಬೆನ್ನಿಗೆ ಬಾರಿಸೋದು ಗೊತ್ತು ಎನ್ನುವ ವಾಟ್ಸಾಪ್ ಸ್ಟೇಟಸ್ ಮಲೆನಾಡು ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಸಂದೇಶ ಹಾಕುವ ಮೂಲಕ ಹಿಂದೂ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವ ಮಲೆನಾಡ ಹಿಂದೂ ಕಾರ್ಯಕರ್ತರು ಬಿಜೆಪಿ ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಾವು ಹಿಂದೂ ಕಾರ್ಯಕರ್ತರು. ರಾಜಕೀಯವಾಗಿ ಬಿಜೆಪಿಗೆ ಮತ ನೀಡಿದ್ದೇವೆ. ಪಕ್ಷಕ್ಕಾಗಿ ಯಾವುದೇ ಲಾಭವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಮಾಡುತ್ತಿದ್ದೇವೆ. ಹಾಗಾಂತ ನಾವು ಬಿಜೆಪಿ ನಾಯಕರ ಗುಲಾಮರಲ್ಲ. ನಮ್ಮ ನಿಷ್ಠೆ ಏನಿದ್ದರೂ ತತ್ವ-ಸಿದ್ಧಾಂತಕ್ಕೆ ಮಾತ್ರ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ನನ್ನ ಪತಿ ಏನು ತಪ್ಪು ಮಾಡಿದ್ದಾರೆಂದು ಪ್ರೂಫ್ ಕೊಡಿ: ಬಂಧಿತ ಝಾಕೀರ್ ಪತ್ನಿ ಅಲಳು
ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡಿನಾದ್ಯಂತ ನೂರಾರು ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿ ಬಾರಿ ಹಿಂದೂ ಕಾರ್ಯಕರ್ತರು ಕೊಲೆಯಾದಾಗಲೂ ಸರ್ಕಾರ ಆರೋಪಿಗಳನ್ನು ಕೂಡಲೇ ಬಂಧಿಸುತ್ತೇವೆ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳುತ್ತಲೇ ಬಂದಿದೆ. ಆದರೆ, ಆರೋಪಿಗೆ ಕಠಿಣ ಶಿಕ್ಷೆ ಆಗಿಲ್ಲ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನನ್ನು ಕೊಂದವರಿಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿದೆ. ಸರ್ಕಾರದ ಕಠಿಣ ಕಾನೂನು ಕ್ರಮಕ್ಕೆ ಸಿದ್ಧ ಹೇಳಿಕೆಯಿಂದ ನೊಂದಿರುವ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಈ ರೀತಿಯಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲ ಕಾರ್ಯಕರ್ತರು ಪ್ರವೀಣ್ ಸಾವಿಗೆ ಸೂಕ್ತ ನ್ಯಾಯ ಸಿಗುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಬಾರದೆಂದು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಸಿಎಂ ನೋಡಲು ಡಿಸೆಂಟ್ ಆದರೆ, ನಿರ್ಣಯಗಳು ತುಂಬಾ ಸ್ಟ್ರಾಂಗ್: ಸುಧಾಕರ್