ತವರು ಜಿಲ್ಲೆಗೆ ಸಿಎಂ ಬರ್ತ್ ಡೇ ಗಿಫ್ಟ್

Public TV
1 Min Read

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು 78ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಶಿವಮೊಗ್ಗ ಟೌನ್ ನಿಂದ ಚೈನ್ನೈ ಟೌನ್ ಗೆ ತತ್ಕಾಲ್ ಎಕ್ಸ್‍ಪ್ರೆಸ್ ಟ್ರೈನಿನ ದ್ವೈ ಸಾಪ್ತಾಹಿಕ ಸೇವೆಗೆ ಇಂದು ಮುಖ್ಯಮಂತ್ರಿಗಳು ಹಸಿರು ನಿಶಾನೆ ನೀಡಿದರು. ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ರೈಲು ಸೇವೆಗೆ ಸಿಎಂ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಡಿಸಿಎಂ ಗೋವಿಂದ ಕಾರಜೋಳ ಭಾಗವಹಿಸಿದ್ದರು.

ಫೆ.28 ರಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಶಿವಮೊಗ್ಗದಿಂದ ಹಾಗೂ ಫೆ.29ರಿಂದ ಪ್ರತಿ ಮಂಗಳವಾರ ಮತ್ತು ಶನಿವಾರದಂದು ಚೆನ್ನೈನಿಂದ ಶಿವಮೊಗ್ಗ ಚೆನ್ನೈ ಟೌನ್ ತತ್ಕಾಲ್ ಎಕ್ಸ್‍ಪ್ರೆಸ್ ರೈಲು ಸಂಚರಿಸಲಿದೆ. 2019 ರಲ್ಲಿ ಸಾಪ್ತಾಹಿಕ ರೈಲು ಸೇವೆಗೆ ಚಾಲನೆ ಕೊಡಲಾಗಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೊಂದು ಟ್ರೈನ್ ಅನ್ನು ಚಾಲನೆ ರೈಲ್ವೆ ಇಲಾಖೆ ಆರಂಭಿಸಿದೆ. ಆ ಮೂಲಕ ಸಿಎಂ ತಮ್ಮ ಜನ್ಮದಿನದಂದೇ ತವರು ಜಿಲ್ಲೆಗೆ ಸಿಎಂ ಉಡುಗೊರೆ ಕೊಟ್ಟಂತಾಗಿದೆ.

ಕಾರ್ಯಕ್ರಮದಲ್ಲಿ ಮಾತಾಡಿದ ಸಿಎಂ ಯಡಿಯೂರಪ್ಪ, ಶಿವಮೊಗ್ಗ ರೈಲ್ವೇ ಕಳೆದ ಒಂದು ದಶಕದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿದೆ. ಶಿವಮೊಗ್ಗದಿಂದ ಚೈನ್ನೈಗೆ ವಾರದಲ್ಲಿ ಎರಡು ದಿನ ಈ ಸೇವೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು ಶಿವಮೊಗ್ಗದ ಜನ ಸದುಪಯೋಗ ಪಡಿಸಿಕೊಳ್ಳಬೇಕು. ಈ ವಿಸ್ತರಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅಪಾರವಾಗಿ ಶ್ರಮಿಸಿದ್ದಾರೆ ಅಂದರು. ಇದೇ ವೇಳೆ ಸಿಎಂ ಈ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *