ಬಳ್ಳಾರಿ: ಅಕ್ಕನನ್ನು ತವರಿಗೆ ಕರೆದುಕೊಂಡು ಹೋಗುತ್ತಿದ್ದ ತಮ್ಮ ಹಾಗೂ ಸಹೋದರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಬಳಿ ನಡೆದಿದೆ.
ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಬಸವರಾಜ (35) ಹಾಗೂ ನಾಗಮ್ಮ (41) ಮೃತಪಟ್ಟ ಅಕ್ಕ-ತಮ್ಮ. ಬೈಕ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಸ್ವಸ್ಥಗೊಂಡಿದ್ದ ಬಸವರಾಜನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಘಟನೆ ಸೋಮವಾರ ನಡೆದಿದೆ.
ಘಟನೆಯ ವಿವರ: ಬಸವರಾಜ ಅಕ್ಕ ನಾಗಮ್ಮ ಅವರನ್ನು ಕರೆದುಕೊಂಡು ಬರಲು ಸೋಮವಾರ ವಲಸೆ ಗ್ರಾಮಕ್ಕೆ ಹೋಗಿದ್ದನು. ಸಹೋದರ ಬಂದ ಖುಷಿಯಲ್ಲಿ ಸಿದ್ಧವಾಗಿ ನಾಗಮ್ಮ ಬೈಕ್ ಏರಿ ತವರಿಗೆ ಹೊರಟಿದ್ದಳು. ಆದರೆ ದಾರಿ ಮಧ್ಯದಲ್ಲಿ ಖಾಸಗಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನಾಗಮ್ಮ ಹಾರಿಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸವಾರ ಬಸವರಾಜನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಘಟನೆಯ ವೇಳೆ ವೇಗವಾಗಿದ್ದ ಬಸ್ ರಸ್ತೆ ಬಿಟ್ಟು ಕೆಳಗೆ ಇಳಿದಿದ್ದು, ಭಾರೀ ಅನಾಹುತವೊಂದು ಕೈ ತಪ್ಪಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv