ದಾನಮ್ಮ ಅತ್ಯಾಚಾರ, ಕೊಲೆ ಪ್ರಕರಣ: ಅರೆಸ್ಟ್ ಆದವರೆಲ್ಲಾ ಬಿಜೆಪಿಯವ್ರು – ಯಾಕ್ ಸುಮ್ಮನಿದ್ದೀರಾ ಅಂತಾ ಕಾಂಗ್ರೆಸ್ ಪ್ರಶ್ನೆ

Public TV
1 Min Read

ಬೆಂಗಳೂರು: ದಲಿತ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ಎಲ್ಲರೂ ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಎಲ್ಲ ಕಡೆ ಪ್ರತಿಭಟನೆ ನಡೆಸುವ ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್ ಸಿಂಹ ಎಲ್ಲಿದ್ದೀರಾ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಎಲ್. ಹನುಮಂತಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಬಂಧಿತ ಆರೋಪಿಗಳಾದ ದೀಪಕ್ ಮುಳಸಾವಿಗೆ, ಶ್ರೀಶೈಲ ಉಚ್ಚಂಡಿ, ಅಪ್ಪಸಾಬಾ ಬಾಳಾ ಶೆಟ್ಟಿ ಇವರೆಲ್ಲಾ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗಿನ ಶ್ರೀಶೈಲ ಉಚ್ಚಂಡಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದೂ ಸಂಘಟನೆಗಳನ್ನು ಇಂತಹ ಕೃತ್ಯಗಳಿಗೆ ಬಿಜೆಪಿ ನಾಯಕರು ಬಳಸಿಕೊಳ್ತಿದ್ದಾರೆ. ಕಲ್ಲಪ್ಪ ಹಂಡಿಬಾಗ್ ಹತ್ಯೆಯ ಆರೋಪಿ ಕೂಡ ಭಜರಂಗದಳದ ಮೂಲದ ವ್ಯಕ್ತಿ. ಗುರುವಾರ ರಾಯಚೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದ ಯುವಕ ಕೂಡಾ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಹಿಂದೂ ಸಂಘಟನೆಗಳ ಸದಸ್ಯರ ಪಟ್ಟಿ ತಯಾರಿಸಿ ಅವರ ಮೇಲೆ ಗಮನ ಇಡಬೇಕು ಎಂದು ಹನುಮಂತಯ್ಯ ಹೇಳಿದ್ದಾರೆ.

ಪ್ರತಾಪ್ ಸಿಂಹ ಮತ್ತು ಶೋಭಾ ಕರಂದ್ಲಾಜೆ ಹೋದ ಕಡೆಯಲೆಲ್ಲಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ದಲಿತ ಬಾಲಕಿ ದಾನಮ್ಮ, ದೇವದುರ್ಗದ ಯಲ್ಲಪ್ಪ ಹುಲ್ಲಾರ್ತಿ ವಿಚಾರದಲ್ಲಿ ಯಾಕೆ ಮಾತಾಡ್ತಿಲ್ಲ. ಆರೋಪಿಗಳ ರಕ್ಷಣೆಗೆ ಬಿಜೆಪಿ ನಾಯಕರುಗಳು ಮುಂದಾಗಿದ್ದಾರೆ ಅಂತಾ ಆರೋಪಿಸಿದರು.

ಇನ್ನೂ ಇತ್ತ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವಿಜಯಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರಿಗೂ ತಟ್ಟಿದೆ. ಇಷ್ಟು ದಿನ ಬಿಟ್ಟು ಈಗ ಯಾಕೆ ಬಂದಿದ್ದೀರಿ. ಇಲ್ಲಿ ನಿಲ್ಲ ಬೇಡಿ. ನಿಮ್ಮ ಸಾಂತ್ವನ ನಿಮ್ಮ ಬೆಂಬಲ ಬೇಡ ಅಂತಾ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಚಿವರು ಜಾಗ ಖಾಲಿ ಮಾಡಿದರು.

https://www.youtube.com/watch?v=fiETg8uCH1k

Share This Article
Leave a Comment

Leave a Reply

Your email address will not be published. Required fields are marked *