ಎರಡೇ ವರ್ಷದಲ್ಲೇ ಒಡೆದು ಹೋಯ್ತು ಮಹಾಮೈತ್ರಿ: ಬಿಹಾರದಲ್ಲಿ ಮುಂದೆ ಏನಾಗುತ್ತೆ?

Public TV
2 Min Read

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯನ್ನು ಮಣಿಸಲು ಕಾಂಗ್ರೆಸ್ ನಿರ್ಮಾಣ ಮಾಡಿದ್ದ ಮಹಾಘಟಬಂಧನ್ ಎರಡು ವರ್ಷದಲ್ಲೇ ಒಡೆದು ಹೋಗಿದೆ. ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್, ಆರ್‍ಜೆಡಿಗೆ ಬಿಗ್ ಶಾಕ್ ನೀಡಿದ್ದಾರೆ.

ಭ್ರಷ್ಟಾಚಾರ ಆರೋಪ ಹೊತ್ತ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಾಲೂ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೆಂದು ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದರು. ಆದರೆ ಇತ್ತ ಕಡೆ ಲಾಲೂ ನಿತೀಶ್ ಮಾತಿಗೆ ಬೆಲೆ ಕೊಡದೇ ಪುತ್ರನ ಪರ ಬ್ಯಾಟಿಂಗ್ ಮುಂದುವರೆಸುತ್ತಲೇ ಇದ್ದರು. ಭ್ರಷ್ಟಾಚಾರ ಸಹಿಸದ ನನ್ನ ಮಾತಿಗೆ ಬೆಲೆ ನೀಡದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಬುಧವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡುವ ಮೂಲಕ ಮಹಾಮೈತ್ರಿಯನ್ನು ಬ್ರೇಕಪ್ ಮಾಡಿಕೊಂಡಿದ್ದಾರೆ.

ಒಂದು ವೇಳೆ ತೇಜಸ್ವಿ ಯಾದವ್ ರಾಜೀನಾಮೆ ನೀಡುತ್ತಿದ್ದರೆ ಮಹಾಘಟಬಂಧನ್ ಮುಂದುವರೆಯುತಿತ್ತೋ ಏನೋ? ಆದರೆ ಈಗ ನಿತೀಶ್ ಕುಮಾರ್ ರಾಜೀನಾಮೆ ನೀಡುವ ಮೂಲಕ ಎಲ್ಲ ರಾಜಕೀಯ ನಾಯಕರಿಗೆ ಶಾಕ್ ನೀಡಿದ್ದಾರೆ. ನಿತೀಶ್ ರಾಜೀನಾಮೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಮುಂದಿನ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‍ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು.

ಈಗ ಮಹಾಘಟಬಂಧನ್ ಬ್ರೇಕಪ್ ಆದರೂ ಬಿಜೆಪಿ ಮತ್ತು ಜೆಡಿಯು ಒಂದಾದರೆ ಮತ್ತೆ ನಿತೀಶ್ ಕುಮಾರ್ ಸಿಎಂ ಆಗಲು ಸಾಧ್ಯವಿದೆ. 243 ಸ್ಥಾನಗಳ ಪೈಕಿ ಬಹುಮತ ಸಾಬಿತುಪಡಿಸಲು 122 ಶಾಸಕರ ಬೆಂಬಲ ಅಗತ್ಯ. ಹೀಗಾಗಿ ಜೆಡಿಯು(71) ಮತ್ತು ಬಿಜೆಪಿ(53) ಶಾಸಕರು ಒಂದಾದರೆ 124 ಶಾಸಕರ ಬೆಂಬಲ ಸಿಗುತ್ತದೆ. ಬಿಜೆಪಿಯ ಬಾಹ್ಯ ಬೆಂಬಲ ಪಡೆದು ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಮೂಲಗಳ ಮಾಹಿತಿಯ ಮೇರೆ ಸುದ್ದಿಯನ್ನು ಪ್ರಕಟಿಸಿವೆ

ಲಾಲೂ ಆಟ ನಡೆಯಲ್ಲ: ಆರ್‍ಜೆಡಿ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಆರ್‍ಜೆಡಿ 80, ಕಾಂಗ್ರೆಸ್ 27 ಶಾಸಕರು ಸೇರಿದರೂ 107 ಶಾಸಕರ ಬೆಂಬಲ ಸಿಗುತ್ತದೆ. ಇನ್ನೂ ಇತರೇ 12 ಮಂದಿ ಇವರಿಗೆ ಬೆಂಬಲ ನೀಡಿದರೆ ಒಟ್ಟು ಶಾಸಕರ ಸಂಖ್ಯೆ 119 ಆಗುತ್ತದೆ. ಹೀಗಾಗಿ ಬಹುಮತದ ಮ್ಯಾಜಿಕ್ ಸಂಖ್ಯೆ 122 ತಲುಪಲು ಇನ್ನೂ ಮೂರು ಶಾಸಕರ ಬೆಂಬಲ ಬೇಕಾಗುತ್ತದೆ.

 

Share This Article
Leave a Comment

Leave a Reply

Your email address will not be published. Required fields are marked *