ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಕೊಲೆ?

Public TV
1 Min Read

ಬಳ್ಳಾರಿ: ಕಳೆದ ಒಂದು ವಾರದ ಹಿಂದೆ ಬಳ್ಳಾರಿಯ ಹುಸೇನ್ ನಗರದ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಬಳ್ಳಾರಿ ಹುಸೇನ್ ನಗರದ ನಿವಾಸಿಯಾದ ಲೀಲಾವತಿ ಕಳೆದ ಒಂದು ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಲೀಲಾವತಿ ಅವರ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಸಹೋದರಿಯನ್ನು ರಾಮು ಎಂಬ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ರಾಮು ಕಳೆದ ಮೂರು ವರ್ಷಗಳ ಹಿಂದೆ ಲೀಲಾವತಿ ಪತಿ ಬಸವರಾಜರನ್ನು ಕೊಲೆ ಮಾಡಿದ ಬಗ್ಗೆ 6 ತಿಂಗಳ ಶಿಕ್ಷೆ ಅನುಭವಿಸಿದ್ದ. ಲೀಲಾವತಿಗಾಗಿ ಆಕೆಯ ಗಂಡನನ್ನು ಕೊಲೆ ಮಾಡಿದ್ದ ರಾಮು, ಇದೀಗ ಇನ್ನೊಂದು ಮದುವೆಯಾಗಲು ಈಗ ಆಕೆಯನ್ನೇ ಕೊಲೆ ಮಾಡಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಲೀಲಾವತಿ ಸಹೋದರಿ ವಸಂತಿ, ತಮ್ಮ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ರಾಮು ಎಂಬುವರ ವಿರುದ್ಧ ದೂರು ನೀಡಿದರೆ ಪೊಲೀಸರು ಸ್ವೀಕರಿಸುತ್ತಿಲ್ಲ. ಕೇವಲ ನಾಪತ್ತೆ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ. ಹೀಗಾಗಿ ತಮಗೇ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಲೀಲಾವತಿ ಸಂಬಂಧಿಕರು ಇಂದು ಮಹಿಳಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *