ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು

Public TV
2 Min Read

– ಇಬ್ಬರು ಯುವಕರನ್ನು ಪ್ರೀತಿಸುತ್ತಿದ್ದ ಯುವತಿ

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕು ದೊಡ್ಡನಾಯಕನ ಕೊಪ್ಪಲು ಗ್ರಾಮದಲ್ಲಿ ಕಳೆದ ತಿಂಗಳು ನಡೆದಿದ್ದ ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಆಗಸ್ಟ್ ನಲ್ಲಿ ಅದೇ ಊರಿನ ಯುವಕನೊಬ್ಬನ ಕೊಲೆಯಾಗಿತ್ತು. ಇದೇ ಕಾರಣಕ್ಕೆ ಮೃತನ ಪೋಷಕರು ನೀಡಿದ ಕಿರುಕುಳದಿಂದ ಮನನೊಂದು ಮೂವರು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಅದರೆ ಈಗ ಪೊಲೀಸ್ ತನಿಖೆ ವೇಳೆ ಇಡೀ ಘಟನೆಗೆ ಪ್ರೇಮ ಪುರಾಣ ಕಾರಣ ಎಂಬ ಅಸಲಿ ಸಂಗತಿ ಬಯಲಾಗಿದೆ.

ಮೃತಪಟ್ಟ ಭೂಮಿಕಾ ಇಬ್ಬರು ಯುವಕರನ್ನು ಪ್ರೀತಿಸುತ್ತಿದ್ದಳು. ಇದನ್ನು ತಿಳಿದ ಆಕೆಯ ಪೋಷಕರು ಶ್ರೀಧರ್ ನನ್ನು ಕಳುಹಿಸಿ ನಾಗರಾಜ್ ನನ್ನು ಕೊಲೆ ಮಾಡಿಸಿದ್ದರು. ಈ ಗುಟ್ಟುರಟ್ಟಾಗುವ ಭಯದಿಂದ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಾಗರಾಜ್ ಕಡೆಯವರು ಆರೋಪಿಸಿದ್ದಾರೆ.

ಅರಕಲಗೂಡು ತಾಲೂಕು ದೊಡ್ಡನಾಯಕನಕೊಪ್ಪಲಲ್ಲಿ ಕಳೆದ ತಿಂಗಳು ನಡೆದಿದ್ದ ಯುವಕನ ಕೊಲೆ ಮತ್ತು ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಆಗಸ್ಟ್ 7ರಂದು ಅದೇ ಊರಿನ ನಾಗರಾಜ್ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ. ಮಾರನೇ ದಿನ ಮೃತದೇಹ ಸಮೀಪದ ನಾಲೆಯಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಆಗಸ್ಟ್ 26 ರಂದು ಒಂದೇ ಬೀದಿಯ ಕೃಷ್ಣೇಗೌಡ, ಆತನ ಪತ್ನಿ ಮಂಜುಳಾ ಮತ್ತು ಪ್ರಥಮ ಪಿಯುಸಿ ಓದುತ್ತಿದ್ದ ಭೂಮಿಕಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸದ್ಯ ಇದಕ್ಕೆ ಬೇರೆಯದೇ ಕತೆ ಹೆಣೆಯಲಾಗಿತ್ತು. ಮಗನ ಕೊಲೆಗೆ ಕೃಷ್ಣೇಗೌಡ ಮತ್ತು ಅವರ ಮನೆಯವರು ಕಾರಣ ಎಂದು ನಾಗರಾಜ್ ತಂದೆ ದಾಸೇಗೌಡ, ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಮನನೊಂದು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಆದರೆ ಈಗ ಪೊಲೀಸ್ ತನಿಖೆಯ ನಂತರ ಬಯಲಾಗಿರುವ ಅಸಲಿ ವಿಷಯವೆನೆಂದರೆ ಮೃತ ಭೂಮಿಕಾ ಕೊಲೆಯಾದ ನಾಗರಾಜ್ ಮತ್ತು ಅರಕಲಗೂಡು ತಾಲೂಕು ಅಡಿಕೆ ಬೊಮ್ಮನಹಳ್ಳಿಯ ಶ್ರೀಧರ್ ಪ್ರೀತಿಸುತ್ತಿದ್ದಳು. ಈ ವಿಷಯ ಭೂಮಿಕಾ ಪೋಷಕರಿಗೂ ಗೊತ್ತಿತ್ತು. ಆದರೆ ನಾಗರಾಜ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪದ ಕೃಷ್ಣೇಗೌಡ, ಶ್ರೀಧರ್ ಗೆ ಸುಪಾರಿ ಕೊಟ್ಟು ನಾಗರಾಜ್ ನನ್ನು ಕೊಲೆ ಮಾಡಿಸಿದ್ದಾರೆ.

ಶ್ರೀಧರ್ ಅರೆಸ್ಟ್ ಆದರೆ ನಾಗರಾಜ್ ಕೊಲೆಯ ಅಸಲಿ ವಿಷಯ ಬಯಲಾಗಲಿದೆ ಎಂದು ಹೆದರಿ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ನಾವು ಕಾರಣರಲ್ಲ ಎಂದು ನಾಗರಾಜ್ ಕಡೆಯವರು ಹೇಳುತ್ತಿದ್ದಾರೆ. ನಾಗರಾಜ್ ಕೊಲೆ ಸಂಬಂಧ ಶ್ರೀಧರ್ ಸೇರಿ ಮೂವರು ಆರೋಪಿಗಳನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. ವಯಸ್ಸು 18 ತುಂಬುವ ಮುನ್ನವೇ ಪ್ರೀತಿ ಪ್ರೇಮ ಅಂತ ಹುಚ್ಚಾಟ ಆಡುತ್ತಿದ್ದ ಮಗಳಿಗೆ ಬುದ್ಧಿವಾದ ಹೇಳಬೇಕಿದ್ದ ಪೋಷಕರು ಬೇರೇನೋ ಮಾಡಲು ಹೋಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಹೆಣ ಬೀಳಲು ಕಾರಣವಾಗಿದೆ. ಅಷ್ಟೇ ಅಲ್ಲ, ಹುಡಿಗಿಯಾಸೆಗೆ ತನ್ನದೇ ಓರಗೆಯವನ ಜೀವ ತೆಗೆದ ಶ್ರೀಧರ್ ಹಾಗೂ ಮೂವರು ಜೈಲು ಸೇರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *