‘ದೃಷ್ಟಿ ಬೊಟ್ಟು’ ಧಾರಾವಾಹಿಯಲ್ಲಿ ಮಹಾ ತಿರುವು

Public TV
2 Min Read

ಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುತ್ತಿರುವ ‘ದೃಷ್ಟಿ ಬೊಟ್ಟು’ (Drusti Bottu Serial) ಧಾರಾವಾಹಿಯ ಕಥಾಹಂದರ ದೊಡ್ಡ ತಿರುವು ಪಡೆಯುತ್ತಿದೆ. ನಾಯಕಿ ದೃಷ್ಟಿ ತನ್ನ ಕಪ್ಪು ಬಣ್ಣದ ಕಾರಣಕ್ಕೆ ಸಮಾಜದೆದುರು ಸಾಕಷ್ಟು ಕೀಳರಿಮೆ ಹಾಗೂ ಅವಮಾನ ಅನುಭವಿಸುತ್ತಿದ್ದಳು. ಆದರೆ ಕಳೆದ ವಾರದ ಕಥೆಯಲ್ಲಿ ಆಕೆ ಕಪ್ಪು ಬಣ್ಣದವಳಲ್ಲ ಎಂಬುದು ಅನಾವರಣ ಆಗಿತ್ತು. ನಾಯಕಿ ದೃಷ್ಟಿ ಅವರ ತಾಯಿ ಒಂದು ಬಲವಾದ ಕಾರಣಕ್ಕೆ ಮಗಳ ಮುಖಕ್ಕೆ ಮಸಿ ಬಳಿದು ಕಪ್ಪಗೆ ಕಾಣುವಂತೆ ಯಾಕೆ ಮಾಡುತ್ತಿದ್ದಳು ಎಂಬ ಸಂಗತಿ ಬಯಲಾಗಿದೆ.

ದೃಷ್ಟಿಯನ್ನು ಮೆಚ್ಚಿದ ನೋಡುಗರು!

ಧಾರಾವಾಹಿಯ ಮೂರನೇ ವಾರದ ಕತೆಯಲ್ಲಿ ನಾಯಕಿಯ ಸುಂದರವಾದ ಮುಖ ಅನಾವರಣಗೊಂಡಿದ್ದು, ಇದಕ್ಕೆ ವೀಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕ ದತ್ತನಿಗೆ (ವಿಜಯ್ ಸೂರ್ಯ) ಮುದ್ದು ಮುಖದ ದೃಷ್ಟಿ ಒಳ್ಳೆಯ ಜೋಡಿ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ಕತೆಯಲ್ಲಿ ನಾಯಕ ದತ್ತ ಮತ್ತು ನಾಯಕಿ ದೃಷ್ಟಿಯ ಬದುಕು ಒಂದೇ ದಾರಿಯತ್ತ ಸಾಗುತ್ತಿದ್ದು, ಇದೇ ಗುರುವಾರ ಮತ್ತು ಶುಕ್ರವಾರ ಅಂದರೆ ಅಕ್ಟೋಬರ್ 10 ಮತ್ತು 11ರಂದು ಪ್ರಸಾರವಾಗುವ ಸಂಚಿಕೆಯಲ್ಲಿ ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕಥಾಹಂದರ ಮತ್ತೊಂದು ಮಹತ್ವದ ತಿರುವು ಪಡೆಯಲಿದೆ.

ದತ್ತ -ದೃಷ್ಟಿ ಮುಖಾಮುಖಿ!

ಈಗಾಗಲೇ ನಾಯಕಿ ದೃಷ್ಟಿ ಹಿಂದೆ ಬಿದ್ದಿರುವ ಉಳ್ಳಾಗಡ್ಡಿ ಎಂಬ ದುಷ್ಟ ಪೊಲೀಸ್ ಇನ್ಸ್ಪೆಕ್ಟರ್ ಆಕೆಯನ್ನು ಮದುವೆಯಾಗಿ, ಮಾರಾಟ ಮಾಡುವ ಯೋಚನೆಯಲ್ಲಿರುತ್ತಾನೆ. ಇವನ ಕಾಟಕ್ಕೆ ಮನೆ ಬಿಟ್ಟು ಬಂದು ಪರದಾಡುತ್ತಿರುವ ದೃಷ್ಟಿಯ ಕುಟುಂಬಕ್ಕೆ ಅನೀರಿಕ್ಷಿತವಾಗಿ ದತ್ತ ಎದುರಾಗುತ್ತಾನೆ. ನಾಯಕ ಮತ್ತು ನಾಯಕಿ ಮೊದಲ ಬಾರಿಗೆ ಮುಖಾಮುಖಿಯಾಗುವ ಈ ಸಂದರ್ಭವನ್ನು ಸಿನಿಮಾ ಶೈಲಿಯಲ್ಲಿ ಚಿತ್ರೀಕರಿಸಲಾಗಿದ್ದು, ಈ ಸಂಚಿಕೆಗಳು ನೋಡುಗರನ್ನು ದೊಡ್ಡ ಮಟ್ಟದಲ್ಲಿ ರಂಜಿಸಲಿದೆ.

ದೃಷ್ಟಿಯ ಮುಂದಿನ ದಾರಿ?

ಕುಡುಕ ತಂದೆ ತಂದೊಡ್ಡುವ ಸಮಸ್ಯೆಗಳ ಜೊತೆಗೆ ದುಷ್ಟ ಪೊಲೀಸ್ ಇನ್ಸ್ಪೆಕ್ಟರ್ ಉಳ್ಳಾಗಡ್ಡಿಯನ್ನು ಎದುರಿಸುತ್ತಿರುವ ಅಸಹಾಯಕ ದೃಷ್ಟಿಗೆ ದತ್ತನ ಸಹಾಯ ಯಾವ ಮಟ್ಟದಲ್ಲಿರುತ್ತೆ? ಇಲ್ಲಿಂದ ಮುಂದಕ್ಕೆ ದೃಷ್ಟಿಯ ಬದುಕು ಏನಾಗುತ್ತದೆ? ಇನ್ಸ್ಪೆಕ್ಟರ್ ಉಳ್ಳಾಗಡ್ಡಿ ಎಷ್ಟು ದಿನದ ಮಟ್ಟಿಗೆ ಸುಮ್ಮನಾಗುತ್ತಾನೆ? ಅವನ ಮುಂದಿನ ದುಷ್ಟ ನಡೆ ಏನು? ಇದೆಲ್ಲದರ ನಡುವೆ ಅಕ್ಕ -ತಂಗಿಯರಿಂದ ಮೋಸಕ್ಕೆ ಒಳಗಾಗುತ್ತಿರುವ ದತ್ತನ ಬದುಕಿನ ಸಂಕಟಗಳನ್ನು ಸರಿ ಮಾಡುವುದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ‘ದೃಷ್ಟಿ ಬೊಟ್ಟು’ ಕತೆ ಸಾಗುತ್ತದೆ.

Share This Article