ಎಸಿಬಿ ದಾಳಿ ಪ್ರಕರಣಕ್ಕೆ ಹೊಸ ತಿರುವು – ಲಂಚದ ಹಣದಲ್ಲಿ ಶಾಸಕನಿಗೂ 5 ಲಕ್ಷ ಪಾಲು

Public TV
1 Min Read

ಚಿಕ್ಕಬಳ್ಳಾಪುರ: ನಗರ ಯೋಜನಾ ಪ್ರಾಧಿಕಾರದ ಮೇಲೆ ಎಸಿಬಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಚಿಕ್ಕಬಳ್ಳಾಪುರ ಶಾಸಕರಿಗೂ ಲಂಚದ ಹಣದಲ್ಲಿ 5 ಲಕ್ಷ ಕೊಡಬೇಕು ಎನ್ನುವ ಅಂಶ ಎಸಿಬಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿರುವುದು ಉಪಚುನಾವಣೆ ಹೊತ್ತಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಗುರುವಾರ ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯಾಧಿಕಾರಿ ಕೃಷ್ಣಪ್ಪ 3 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಬಳಿಯ ತಮ್ಮ ಲೇಔಟ್‍ನಲ್ಲಿ ಭೂ ಪರಿವರ್ತನೆಗೊಂಡ ಶೇ. 40ರಷ್ಟು ನಿವೇಶನಗಳ ಮಾರಾಟಕ್ಕೆ ಬಿಡುಗಡೆಗೆ ಅನುಮತಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರು. ಹೀಗಾಗಿ ಯೋಜನಾ ಸದಸ್ಯಾಧಿಕಾರಿ ಕೃಷ್ಣಪ್ಪ 9 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದು, 9 ಲಕ್ಷದಲ್ಲಿ 5 ಲಕ್ಷ ಹಣ ಶಾಸಕರಿಗೂ ಕೊಡಬೇಕು. ಇಲ್ಲವಾದರೆ ಎಂಎಲ್‍ಎ ಬಳಿ ಫೋನ್ ಮಾಡಿಸಿ ಕೇವಲ 4 ಲಕ್ಷ ಕೊಡಿ ಸಾಕು ಎಂದು ಹೇಳಿದ್ದಾರೆ.

ಈ ಬಗ್ಗೆ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಉದ್ಯಮಿ ರಾಮಾಂಜಿನಪ್ಪ ಎಸಿಬಿ ಗೆ ದೂರು ನೀಡಿದರು. ದೂರು ಪಡೆದಿದ್ದ ಎಸಿಬಿ ಗುರುವಾರ ಕಾರ್ಯಾಚರಣೆ ನಡೆಸಿ ಕೃಷ್ಣಪ್ಪ ಅವರನ್ನು ಬಲೆಗೆ ಬೀಳಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಉಪಚುನಾವಣೆ ಹೊತ್ತಲ್ಲಿ ಎಸಿಬಿ ದಾಖಲಿಸಿರುವ ಎಫ್‍ಐಆರ್ ನಲ್ಲಿ ಶಾಸಕರಿಗೂ 5 ಲಕ್ಷ ಹಣ ಕೊಡಬೇಕು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅನರ್ಹಗೊಂಡಿದ್ದು, ಎಫ್‍ಐಆರ್ ನಲ್ಲಿ ಉಲ್ಲೇಖವಾಗಿರುವ ಶಾಸಕ ಸುಧಾಕರ್ ಎನ್ನುವುದು ವಿರೋಧ ಪಕ್ಷದವರು ವಾದ. ಹೀಗಾಗಿ ಎಫ್‍ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಪರ ವಿರೋಧದ ಚರ್ಚೆಗಳು ಜೋರಾಗಿ ನಡೆದಿವೆ.

Share This Article
Leave a Comment

Leave a Reply

Your email address will not be published. Required fields are marked *