ಗದಗ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಗದಗ ರಾಜಕಾರಣದಲ್ಲಿ ಬಿಗ್ ಶಾಕ್ ಎದುರಾಗಿದೆ.
ಗದಗದಲ್ಲಿ ಕಾಂಗ್ರೆಸ್ ನಾಯಕರು ರಾತ್ರೋರಾತ್ರಿ ನಡೆಸಿದ ಆಪರೇಷನ್ ಹಸ್ತ ಸಕ್ಸಸ್ ಆಗಿದೆ. ಬಿಜೆಪಿ ಮತಬ್ಯಾಂಕ್ಗೆ ಗಾಳ ಹಾಕಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಗದಗ ಲಿಂಗಾಯತ ಪ್ರಭಾವಿ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಮಲ ಬಿಟ್ಬು ಕೈ ಹಿಡಿಯಲು ಬಿಜೆಪಿ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಸಜ್ಜಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ತಟಸ್ಥವಾಗಿ ಉಳಿದಿದ್ದರು. ಈಗ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆ ಕೈ ಮಿಲಾಯಿಸಲು ಶ್ರೀಶೈಲಪ್ಪ ಮುಂದಾಗಿದ್ದಾರೆ. ಶ್ರೀಶೈಲಪ್ಪ ಬಿದರೂರ ಅವರು ಗದಗ ಮತ್ತು ರೋಣ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು, ಅಪಾರ ಅಭಿಮಾನಿ, ಕಾರ್ಯಕರ್ತರನ್ನು ಹೊಂದಿದ್ದಾರೆ.
ಈಗಾಗಲೇ ಶ್ರೀಶೈಲಪ್ಪ ಬಿದರೂರ, ಕೆಪಿಸಿಸಿ ಪ್ರಚಾರಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಮಾತುಕತೆ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಸೇರಲು ಲಿಂಗಾಯತ ನಾಯಕ ಬಿದರೂರ ಒಲವು ತೋರಿದ್ದು, ಇದರಿಂದ ಬಿಜೆಪಿಗೆ ಸಂಕಷ್ಟ ಸಾಧ್ಯತೆ ಇದೆ.