ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್, ಹೋಟೆಲ್ಗಳಲ್ಲೇ ಕಳೆದ 10 ದಿನದಿಂದ ಬೀಡುಬಿಟ್ಟಿರೋ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಇವತ್ತು ಮುಕ್ತಿ ಸಿಗಲಿದೆ.
ವಿಶ್ವಾಸಮತ ಸಾಬೀತು ಬಳಿಕ 117 ಶಾಸಕರು ತಮ್ಮ ಸ್ವಕ್ಷೇತ್ರಗಳಿಗೆ ಹಿಂದಿರುಗಬಹುದಾಗಿದೆ. ರಾಹುಕಾಲ ಶುರುವಾಗುವ ಮುನ್ನ, ರೆಸಾರ್ಟ್ನಲ್ಲಿರೋ ಜೆಡಿಎಸ್ ಶಾಸಕರು, ಹೋಟೆಲ್ನಲ್ಲಿರೋ ಕಾಂಗ್ರೆಸ್ ಶಾಸಕರು ಬಸ್ಗಳಲ್ಲಿ ವಿಧಾನಸೌಧದ ಕಡೆ ಹೊರಟಿದ್ದಾರೆ.
ಶಾಸಕರ ಬಸ್ಗಳು ಬರೋ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಗೆದ್ದ ದಿನದಿಂದ ಕ್ಷೇತ್ರಗಳಿಂದ ಮಾಯವಾಗಿದ್ದವರು ಈ ದಿನ ಸಂಜೆ ನಾಳೆ ಮತ್ತೆ ತಮ್ಮೂರುಗಳತ್ತ ಮುಖ ಮಾಡಲಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ನಡೆದು ಹೋಗಿತ್ತು. ಇತ್ತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಬಂದಿತ್ತು. ಆದ್ರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡುತ್ತೇವೆಂದು ಹೇಳಿದಾಗ, ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡೂ ಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಬಿಎಸ್ವೈ ಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು.
ಇದರಿಂದ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು. ಹೀಗಾಗಿ ಈ ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರುಗಳು ರೆಸಾರ್ಟ್, ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ್ದರು. ಇಂದು ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡಿದ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲು ಅನುಮತಿ ನೀಡಲಾಗುತ್ತಿದೆ.