ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

Public TV
1 Min Read

ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿನ ಮಂಗಳಾರಾತಿ ತಟ್ಟೆ ಗಲಾಟೆಗೆ ಕೊನೆಗೂ ಧಾರ್ಮಿಕ ದತ್ತಿ ಇಲಾಖೆ ಬ್ರೇಕ್ ಹಾಕಿದೆ.

ಇಷ್ಟು ವರ್ಷ ದೇವಸ್ಥಾನದ ಅರ್ಚಕರು ಮತ್ತು ಸನ್ನಿಧಿ ಪರಿಚಾರಕರು ಬೇರೆ ಬೇರೆ ಮಂಗಳರಾತಿ ಕಾಸಿನ ತಟ್ಟೆ ಇಡುತ್ತಿದ್ದರು. ಇದರಿಂದ ಮಂಗಳಾರತಿ ತಟ್ಟೆ ದುಡ್ಡಿಗೆ ಅರ್ಚರು ಮತ್ತು ಆಗಮಿಕರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ದೇವಾಲಯಕ್ಕೆ ಬರೋ ಭಕ್ತರಿಗೂ ಪ್ರತಿನಿತ್ಯ ಇರಿಸು ಮುರಿಸು ಉಂಟಾಗುತಿತ್ತು.

ಈ ಕಾರಣ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನದಲ್ಲಿ ಇನ್ಮುಂದೆ ಒಂದೇ ಮಂಗಳಾರತಿ ತಟ್ಟೆ ಇಡುವಂತೆ ಸುತ್ತೋಲೆ ಜಾರಿ ಮಾಡಿದೆ. ಇದರ ಜೊತೆಗೆ ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಮಾರ್ಚ್ 1 ರಿಂದ ಭಕ್ತಾದಿಗಳಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ವ್ಯವಸ್ಥೆ ಕೂಡ ಜಾರಿ ಮಾಡಲು ಇಲಾಖೆ ಮುಂದಾಗಿದೆ.

ಇಷ್ಟು ವರ್ಷ ಕೇವಲ ಮಧ್ಯಾಹ್ನದ ಊಟ ಮಾತ್ರ ನೀಡಲಾಗುತ್ತಿತ್ತು. ಈಗ ಮೂರು ಹೊತ್ತು ಭಕ್ತರಿಗೆ ಊಟದ ಪ್ರಸಾದದ ವ್ಯವಸ್ಥೆ ಇರಲಿದೆ. ಇದಕ್ಕಾಗಿ ಹೊಸ ಮೆನೂ ಕೂಡ ಸಿದ್ಧವಾಗಿದೆ. ಬೆಳಿಗ್ಗೆ 7:30 ರಿಂದ 10 ಗಂಟೆ ಮಧ್ಯಾಹ್ನ 12.30 ರಿಂದ ಮೂರು ಗಂಟೆ ಹಾಗೂ ರಾತ್ರಿ 7:30 ರಿಂದ 9 ಗಂಟೆವರೆಗೆ ಪ್ರಸಾದ ನೀಡಲು ಟೈಮ್ ಫಿಕ್ಸ್ ಆಗಿದೆ.

ಸೋಮವಾರ ತರಕಾರಿ ಉಪ್ಪಿಟ್ಟು ಹಾಗೂ ರವೆ ಕೇಸರಿ ಬಾತ್, ಮಂಗಳವಾರ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್, ಬುಧವಾರ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್, ಗುರುವಾರ ಅವಲಕ್ಕಿ ಉಪ್ಪಿಟ್ಟು ಮತ್ತು ಸಿಹಿ ಅವಲಕ್ಕಿ, ಶುಕ್ರವಾರ ತರಕಾರಿ ಬಾತ್ ಹಾಗೂ ಬೆಲ್ಲದ ಅನ್ನ, ಶನಿವಾರ ವಾಂಗಿಬಾತ್ ಹಾಗೂ ರವೆ ಸಜ್ಜಿಗೆ. ಭಾನುವಾರ ಟೊಮೆಟೊ ಬಾತ್ ಹಾಗೂ ರವೆ ಸಜ್ಜಿಗೆ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *