ಅಯ್ಯೋ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ: ಭೂಮಿ ರಿಕ್ವೆಸ್ಟ್

Public TV
2 Min Read

ಖಾಸಗಿ ವಾಹಿನಿಯಲ್ಲಿ ನಡೆಯುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಭೂಮಿ ತಮ್ಮ ಸಹಸ್ಪರ್ಧಿ ಚೈತ್ರಾ ಕೋಟುರ್ ಗೆ ನಿಮ್ಮ ಕಾಲಿಗೆ ಬೀಳ್ತೀನಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶುಕ್ರವಾರದ ಸಂಚಿಕೆಯಲ್ಲಿ ಭೂಮಿ ಮತ್ತು ವಾಸುಕಿ ವೈಭವ್ ಬೆಂಚ್ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಚೈತ್ರಾ ಕೋಟುರ್ ಸಹ ಅಲ್ಲಿದ್ದರು. ಭೂಮಿ ಮಾತನಾಡುವಾಗ ವಾಸುಕಿ ಆಮೇಲೆ ಹೇಳು. ಈಗ ಬೇಡ, ಚೈತ್ರಾ ಇಲ್ಲಿಯೇ ಇದ್ದಾರೆಂಬ ಸನ್ನೆ ಮಾಡಿದರು. ಆದ್ರೂ ಭೂಮಿ ಮಾತ್ರ ತಮ್ಮ ಮಾತು ಮುಂದುವರಿಸಿದ್ದರು. ಕೊನೆಗೆ ವಾಸುಕಿ ಈಗ ಬೇಡ ಆಮೇಲೆ ಹೇಳು ಎಂದು ಜೋರಾಗಿಯೇ ಹೇಳಿದರು.

ಅಲ್ಲಿಯೇ ಇದ್ದ ಚೈತ್ರಾ, ಯಾಕೆ ನಾನಿದ್ದರೆ ನಿಮಗೆ ತೊಂದರೆನಾ ಎಂದು ಪ್ರಶ್ನೆ ಮಾಡಿದರು. ಭೂಮಿಯೇ ಹೇಳಲು ಸಿದ್ಧವಿರುವಾಗ ನೀವೇಕೆ ಬೇಡ ಎಂದು ಹೇಳ್ತಿರಿ. ಈ ರೀತಿ ಮಾತನಾಡೋದು ಸರಿ ಅಲ್ಲ. ಹೀಗೆ ಮಾತನಾಡಿದ್ರೆ ನನ್ನ ಸ್ಥಾನದಲ್ಲಿರುವ ಯಾರಿಗೆ ಆದ್ರೂ ಬೇಸರ ಆಗುತ್ತೆ ಎಂದು ಅಸಮಾಧಾನ ಹೊರಹಾಕಿದರು.

ಮನೆಯ ಎಲ್ಲ ಕಡೆಯೂ ಕ್ಯಾಮೆರಾಗಳಿವೆ. ಇಡೀ ಕರ್ನಾಟಕವೇ ನಿಮ್ಮ ಮಾತನ್ನು ಕೇಳುತ್ತಿರುವಾಗ ನಾನನಿದ್ದರೇನು ನಿಮಗೆ ತೊಂದರೆನಾ? ಭೂಮಿಯೇ ಹೇಳಲು ಸಿದ್ಧವಾಗಿರುವಾಗ ನೀವು ಏಕೆ ಬೇಡ ಎಂದು ಹೇಳುತ್ತೀರಿ. ಭೂಮಿಗೆ ತನ್ನ ಮಾತು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಈಗ ಬೇಡ ಎಂಬ ನಿಮ್ಮ ಮಾತು ನನಗೆ ನೋವು ತರಿಸಿತು ಎಂದು ಚೈತ್ರಾ ಬೇಸರ ವ್ಯಕ್ತಪಡಿಸಿದರು.

ಮಾತಿಗೆ ಮಾತು ಕೊಡುವುದು ತುಂಬಾ ಸರಳ. ನಾನು ನಿಮ್ಮ ಮಾತುಗಳಿಗೆ ಇದೂವರೆಗೂ ಪ್ರತಿಕ್ರಿಯಿಸಿಲ್ಲ. ನಿಮ್ಮ ರೀತಿಯೇ ಸಾತ್ವಿಕವಾಗಿ ನಾನು ಮಾತನಾಡಿದ್ರೆ ನಿಮಗೆ ತಡೆದುಕೊಳ್ಳಲು ಆಗಲ್ಲ. ನಿಮ್ಮ ಮಾತುಗಳಿಗೆ ಟಾಂಗ್ ಕೊಡಲು ನನಗೆ ಇಷ್ಟವಿಲ್ಲ ಮತ್ತು ಭೂಮಿ ಹೇಳುವ ಮಾತು ಕೇಳಿಸಿಕೊಳ್ಳಲು ಮನಸ್ಸಿಲ್ಲ ಎಂದು ಚೈತ್ರಾಗೆ ವಾಸುಕಿ ವೈಭವ್ ಉತ್ತರ ನೀಡಿದರು.

ಕೊನೆಗೆ ಚೈತ್ರಾ ಅಲ್ಲಿಂದ ಬಾತ್‍ರೂಮಿಗೆ ತೆರಳಿದರು. ಚೈತ್ರಾ ಅಲ್ಲಿಂದ ಹೋಗುತ್ತಿದ್ದಂತೆ ವಾಸುಕಿ, ನಿನಗೆ ನಾನು ಹೇಳಿದ್ದು ಕೇಳಿಸಲಿಲ್ವಾ? ಎಂದು ಭೂಮಿಗೆ ಕ್ಲಾಸ್ ತೆಗೆದುಕೊಂಡರು. ಇಷ್ಟರಲ್ಲಿಯೇ ಚೈತ್ರಾ ಮತ್ತೆ ಹೊರಗೆ ಬಂದರು. ನನಗೆ ಯಾರ ಭಯವೂ ಇಲ್ಲ ಎಂದು ವಾಸುಕಿ ಹೇಳುತ್ತಿದ್ದಾಗ ಇಬ್ಬರ ಮಧ್ಯೆ ಪ್ರವೇಶಿಸಿದ ಚೈತ್ರಾ ಮತ್ತೆ ಸ್ಪಷ್ಟನೆ ಕೊಡಲು ಮುಂದಾದರು. ಕೊನೆಗೆ ಭೂಮಿಯೇ, ಅಯ್ಯೋ ಚೈತ್ರಾ ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ ಎಂದು ಹೇಳಿ ಇಬ್ಬರ ಕೋಳಿ ಜಗಳಕ್ಕೆ ಅಂತ್ಯ ಹಾಡಿದರು.

Share This Article
Leave a Comment

Leave a Reply

Your email address will not be published. Required fields are marked *