ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದಲ್ಲೀಗ ಹೋಮ್ ಫೈಟ್ ನಡೆಯುತ್ತಿದೆ. ಮನೆಯ ಕಾದಾಟದಿಂದ ಗೌಡರಿಗೆ ಹೊಸ ತಲೆನೋವೊಂದು ಶುರುವಾಗಿದೆ.
ಹೌದು. ದೊಡ್ಡ ಗೌಡರ ಮನೆಯಲ್ಲಿ ಭವಾನಿ ರೇವಣ್ಣ ಅವರು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯವುದಕ್ಕೆ ಭವಾನಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಗೌಡರ ಮುಂದೆಯೇ ಭವಾನಿ ರೇವಣ್ಣ ಅವರು ಹೆಚ್ಡಿಕೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಈ ಹಿಂದೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ, ಯಾರು ಸ್ಪರ್ಧೆಯಿಲ್ಲ ಎಂದಿದ್ದರು. ಹಾಗಾಗಿಯೇ ನನ್ನ ಮಗ ವಿಧಾನಸಭಾ ಚುನಾವಣೆಗೆ ನಿಲ್ಲೋದು ತಪ್ಪಿತ್ತು. ಈಗ ರಾಮನಗರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಯಾವ ಲೆಕ್ಕದಿಂದ ಅಂತ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.
ನನ್ನ ಮಗ ಪ್ರಜ್ವಲ್ ಭವಿಷ್ಯಕ್ಕೆ ಕಲ್ಲು ಹಾಕುವ ಪ್ರಯತ್ನ ನಡೆಯುತ್ತಿದೆ. ನೀವು ನೋಡಿದ್ರೆ ಲೋಕಸಭೆ ಚುನಾವಣೆ ಅಂತೇಳಿ ಸಮಾಧಾನ ಮಾಡಿದ್ದೀರಾ. ಹಿಂಗೆ ಆದ್ರೆ ನಾವು ಎಲ್ಲಿಗೆ ಹೋಗಬೇಕು, ನನ್ನ ಮಗನಿಗೆ ಅವಕಾಶ ಮಾಡಿಕೊಡಿ ಅಂತ ದೇವೇಗೌಡರ ಮುಂದೆಯೇ ಪ್ರಜ್ವಲ್ ಪರ ಭವಾನಿ ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.