ಲೋಕೋಪಯೋಗಿ ಸಚಿವರ ಕೆಲಸಕ್ಕೆ ಪತ್ನಿ ಭವಾನಿ ರೇವಣ್ಣ ಫುಲ್‌ ಮಾರ್ಕ್ಸ್‌

Public TV
1 Min Read

– ರಾಜ್ಯವೇ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ!

ಹಾಸನ: ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಇಲಾಖೆಯಲ್ಲಿ ಬಿಡುವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಆಗಿರುವ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿಯಲ್ಲಿ ಗ್ರಾಮದ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪತಿ ರೇವಣ್ಣ ಅವರು ಯಾವಾಗ್ಲು ದೊಡ್ಡ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಜನರು ಸಣ್ಣ ಪುಟ್ಟ ಕೆಲಸ ಕೇಳಿದರೆ ಕೂಡ ಮಾಡಿಸೋಣ ಎಂದು ಯಾವುದನ್ನೂ ಕೈಬಿಡದೆ ಮಾಡುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದರು.

ರೇವಣ್ಣ ಅವರ ಬಳಿ ಆಗುವುದಿಲ್ಲ ಎಂಬ ಪದವೇ ಇಲ್ಲ. ಅವರು ಹಾಸನದಿಂದ ಚನ್ನರಾಯಪಟ್ಟಣ ಕ್ರಾಸ್ ಮಾಡಿ ತೆರಳಿದ್ದಾರೆ ಎಂದರೆ ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಆ ಕಡೆಯಿಂದ ನೆಲಮಂಗಲ ಬಿಟ್ಟು ಬಂದಿದ್ದರೆ ಅಂದರೆ ಆ ಕೆಲಸ ಮಾಡಿಸಿಕೊಂಡು ವಾಪಸ್ ಬರುತ್ತಿದ್ದಾರೆ ಎಂದರ್ಥ ಎಂದು ಯೋಚನೆ ಮಾಡುತ್ತೇವೆ. ಒಂದೊಮ್ಮೆ ಅವರು ಬೆಂಗಳೂರಿನಲ್ಲೇ ಉಳಿದರೆ ಹೋದ ಕೆಲಸಕ್ಕೆ ಸಂಬಂಧ ಪಟ್ಟ ಸಚಿವರೋ ಅಥವಾ ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ ಎಂದು ತಿಳಿಸಿದರು.

ರಾಜ್ಯವೇ ಅವರಿಗೆ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ ಎಂದು ಜನ ಹೇಳುತ್ತಾರೆ. ಆದರಂತೆ ಅವರು ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸುತ್ತಾರೆ. ಅವರಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದ್ದು, ಕೆಲಸ ಮಾಡುವುದಲ್ಲಿ ರೇವಣ್ಣರವರು ಯಾವತ್ತೂ ಮೊದಲ ಸ್ಥಾನಕ್ಕೆ ಬರುತ್ತಾರೆ ಎಂದು ಪತಿ ಕೆಲಸದ ಬಗ್ಗೆ ಪತ್ನಿ ಭವಾನಿ ರೇವಣ್ಣ ಅವರು ಫುಲ್ ಮಾರ್ಕ್ಸ್‌ ಕೊಟ್ಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *