ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

Public TV
1 Min Read

ಸಿದ್ದರಾಮಯ್ಯ ವೀಕ್ ಮುಖ್ಯಮಂತ್ರಿ: ನಿವೃತ್ತ ಪೊಲೀಸ್ ಅಧಿಕಾರಿ ವಾಗ್ದಾಳಿ

ಮೈಸೂರು: ದಯಾನಂದ್ (B.Dayananda) ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಸರ್ಕಾರದ ವಿರುದ್ಧ ಗುಡುಗಿದರು.

ಸಿದ್ದರಾಮಯ್ಯ ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗಪಡಿಸಿಕೊಂಡು ಐಎಎಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

ಇದು ದಯಾನಂದ್‌ಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆ ಮಾಡಿದ ಕಗ್ಗೊಲೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು. ಅದನ್ನ ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ? ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

ಯಾವುದೊ ಆಫ್ರಿಕಾ ದೇಶದಲ್ಲಿ ಹೆಣಗಳನ್ನ ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲಿ ಹೊತ್ತಿಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.

Share This Article