ಯಡಿಯೂರಪ್ಪ ನೆರೆ ಪ್ರವಾಸವನ್ನ ಕುಟ್ಟಿ ಕುಂದಾಪುರಕ್ಕೆ ಹೋಲಿಸಿದ ಭೋಜೇಗೌಡ

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಹಾನಿ ವೇಳೆ ಏಕಾಂಗಿಯಾಗಿ ಪ್ರವಾಸ ಮಾಡಿದ್ದೆ ಇವತ್ತು ದೊಡ್ಡ ಚರ್ಚೆ ಆಯ್ತು. ಸಿಎಂ ಏಕಾಂಗಿಯಾಗಿ ಪ್ರವಾಸ ಮಾಡಿದ್ರು. ಆದ್ರೆ ಯಾವುದೇ ಉಪಯೋಗವಾಗಲಿಲ್ಲ. ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ ಅಂತ ಜೆಡಿಎಸ್ ಸದಸ್ಯ ಬೋಜೇಗೌಡ ಟೀಕಿಸಿದರು.

ಇಷ್ಟಕ್ಕೆ ಸುಮ್ಮನಾಗದ ಭೋಜೇಗೌಡ, ನೆರೆಹಾನಿ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಂಪುಟದಲ್ಲಿದ್ದರೂ ಪರಿಹಾರ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಬಿಜೆಪಿ ನಾರಾಯಣಸ್ವಾಮಿ ಪರಿಷತ್ ಕಲಾಪದಲ್ಲಿ ಸಮರ್ಥಿಸಿಕೊಂಡರು. ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಇದ್ದರೂ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ರು. ವಯಸ್ಸನ್ನೂ ಲೆಕ್ಕಿಸದೇ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದರು.

ತಕ್ಷಣ ನಾರಾಯಣಸ್ವಾಮಿ ಮಾತಿಗೆ ಅಡ್ಡಿಪಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರಲ್ಲಿ ಎರಡು ಮಾತಿಲ್ಲ ಆದರೆ ಅವರ ಕಥೆ ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ. ಮನೆಯಲ್ಲಿ ಅಪ್ಪ ಅಮ್ಮ ನಾಳೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ರಾತ್ರಿ ಮಾತಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಕುಟ್ಟಿ ಬೆಳಗ್ಗೆ ಎದ್ದ ಕೂಡಲೇ ಕುಂದಾಪುರಕ್ಕೆ ಹೋಗುತ್ತಾನೆ, ಸಂಜೆ ವಾಪಸ್ ಬರುತ್ತಾನೆ ಅಪ್ಪ ಅಮ್ಮ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ಮಾತಾಡಿಕೊಳ್ತಾ ಇದ್ರಲ್ಲ ಅದನ್ನ ಕೇಳಿಸಿಕೊಂಡು ಕುಂದಾಪುರಕ್ಕೆ ಹೋಗಿಬಂದೆ ಎನ್ನುತ್ತಾನೆ, ಯಾಕೆ ಹೋಗಬೇಕಿತ್ತು, ಏನು ಮಾತನಾಡಬೇಕಿತ್ತು ಎನ್ನುವುದು ಗೊತ್ತಿಲ್ಲದೇ ಸುಮ್ಮನೆ ಹೋಗಿಬಂದಿದ್ದ ಅದೇ ರೀತಿ ಸಿಎಂ ನೆರೆ ಪ್ರವಾಸ ಮಾಡಿದ್ದಾರೆ .ಯಾಕೆ ಹೋದರು? ಏನು ಮಾಡಬೇಕಿತ್ತು? ಅದನ್ನು ಮಾತ್ರ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

ಬೋಜೇಗೌಡ ಮಾತಿಗೆ ಕೆರಳಿದ ಡಿಸಿಎಂ ಲಕ್ಷ್ಮಣ ಸವದಿ ಹಿಂದಿನ ಸಿಎಂ ಗಳು ಯಾವ ತರಹ ಗ್ರಾಮ ವಾಸ್ತವ್ಯ ಮಾಡಿದ್ರು ಏನ್ ಮಾಡಿದ್ರು ನಮಗೂ ಗೊತ್ತಿದೆ ಎಂದರು. ಹಿಂದೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು. ಕುಮಾರಸ್ವಾಮಿ ಸಿಎಂ ಅವರನ್ನು ನಾನೇ ಪ್ರವಾಹ ಪೀಡಿತ ಸ್ಥಳಕ್ಕೆ ಕರೆದೊಯ್ದಿದ್ದೆ ನಾನೇ ಟ್ರ್ಯಾಕ್ಟರ್ ನಲ್ಲಿ ಕೂರಿಸಿದ್ದೆ, ಅವರು ಎಲ್ಲಿ ಊಟ ಮಾಡಿದ್ರು, ಎಲ್ಲಿ ಮಲಗಿದ್ರು, ಎಲ್ಲಿ ಏನ್ ಮಾಡಿದ್ರು ನನಗೂ ಗೊತ್ತಿದೆ ಎಂದರು.

ಡಿಸಿಎಂ ಸವದಿ ಮಾತಿಗೆ ಕೆರಳಿ ಕೆಂಡವಾದ ಜೆಡಿಎಸ್ ಪರಿಷತ್ ಸದಸ್ಯರು, ಹೆಚ್ಡಿಕೆ ಎಲ್ಲಿ ಮಲಗಿದ್ರು ಅನ್ನೋದು ಒಳ್ಳೆ ಮಾತಲ್ಲ, ಏನ್ ಮಾಡಿದ್ರು ಹೇಳಿ ನೋಡೋಣ ಎಂದು ಪಟ್ಟುಹಿಡಿದರು. ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಎಂದರೆ ಸ್ಟಾರ್ ಹೋಟೆಲ್ ಬಿಟ್ಟು ಹೊರಗಡೆನೇ ಬಂದಿರಲಿಲ್ಲ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಯಾವ ಸಿಎಂ ಏನು ಭರವಸೆ ನೀಡಿದ್ದರು ನಂತರ ಏನು ಮಾಡಿದರು ಎಂದು ಚರ್ಚೆಗೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ ಎನ್ನುವ ಮನವಿಯನ್ನು ಸಭಾಪತಿಗಳಿಗೆ ಸಲ್ಲಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.

Share This Article
Leave a Comment

Leave a Reply

Your email address will not be published. Required fields are marked *