ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡ್ಬೇಕು: ವಚನಾನಂದ ಸ್ವಾಮೀಜಿ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಈಗ ಲಿಂಗಾಯತ ಸಮುದಾಯದ ಸಂಕಟ ಹೆಚ್ಚಾಗಿದೆ. ಕಾಂಗ್ರೆಸ್, ಜೆಡಿಎಸ್‍ನಿಂದ ಬಂದು ಗೆದ್ದವರಿಗೆ ಇನ್ನೂ ಮಂತ್ರಿ ಸ್ಥಾನ ಕೊಡೋದಕ್ಕೆ ಆಗಿಲ್ಲ. ಹೈಕಮಾಂಡ್ ಭೇಟಿ ಮಾಡೋದಕ್ಕೆ ಟೈಮ್ ಕೂಡ ಸಿಕ್ಕಿಲ್ಲ. ಆದರೆ ಪಕ್ಷದೊಳಗಿನ ಲಿಂಗಾಯತ ಸಮುದಾಯದ ಆಪ್ತರೇ ಸಚಿವ ಸ್ಥಾನಕ್ಕೆ ಕ್ಯೂ ನಿಂತಿದ್ದಾರೆ. ಈ ನಡುವೆ ಪಂಚಮಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳನ್ನಾದ್ರೂ ಕೊಡಬೇಕು ಅಂತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ 15 ಶಾಸಕರನ್ನ ಕೊಟ್ಟಿದೆ. ಬಿಜೆಪಿಯಲ್ಲಿ 15 ಶಾಸಕರು ಪಂಚಮಸಾಲಿ ಸಮುದಾಯದವರು ಇದ್ದಾರೆ. ಕನಿಷ್ಠ ಮೂವರು ಸಚಿವರನ್ನಾಗಿ ಮಾಡಬೇಕು. ಈಗಾಗಲೇ ಒಂದು ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ 5 ಶಾಸಕರಿಗೆ ಒಬ್ಬರಂತೆಯಾದ್ರೂ 3 ಸಚಿವ ಸ್ಥಾನ ಕೊಡಬೇಕು ಅಂತ ಆಗ್ರಹಿಸಿದರು.

ಅಷ್ಟೇ ಅಲ್ಲ ಉಳಿದ ಎರಡು ಸಚಿವ ಸ್ಥಾನದಲ್ಲಿ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡ್ಲೇಬೇಕು. ನಮ್ಮ ಸಮುದಾಯದಿಂದ ಹೆಚ್ಚು ಶಾಸಕರು ಗೆದ್ದಿದ್ದಾರೆ ಎಂದು ಕೇಳ್ತಿದ್ದೀವಿ. ಇದರಲ್ಲಿ ಬೇರೆ ಸಮುದಾಯಕ್ಕೆ ಅನ್ಯಾಯ ಎಲ್ಲಿ ಬಂತು..? ಹೆಚ್ಚು ಸ್ಥಾನ ಗೆದ್ದವರಿಗೆ ಸಚಿವ ಸ್ಥಾನ ಕೊಡದಿರೋದು ಸಾಮಾಜಿಕ ನ್ಯಾಯನಾ..? ಅಂತ ಪ್ರಶ್ನೆ ಮಾಡಿದ್ರು. ನಾವು ಮುಖ್ಯಮಂತ್ರಿಗಳ ಮನೆಬಾಗಿಲಿಗೆ ಹೋಗಲ್ಲ, ಧರಣಿ ಮಾಡುವಷ್ಟು ಕೆಳಮಟ್ಟಕ್ಕೆ ಇಳಿಯಲ್ಲ. ಆದರೆ ಅವರೇ ನಮ್ಮ ಮಠಕ್ಕೆ ಬರುವಂತೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದು ವಿಶೇಷವಾಗಿತ್ತು.

ಇನ್ನೊಂದೆಡೆ ಸುದ್ದಿಗೋಷ್ಟಿಯಲ್ಲಿದ್ದ ಶಾಸಕ ಮುರುಗೇಶ್ ನಿರಾಣಿ, ನಾನು ಸಚಿವನಾಗಬೇಕು ಎಂದು ಶಾಸಕನಾಗಿ ಆಯ್ಕೆಯಾಗಿಲ್ಲ. ನಮ್ಮ ಪಕ್ಷದ ಮುಖಂಡರು ಹಾಗೂ ಜನಾಂಗದ ಪ್ರಮುಖರು ಚರ್ಚಿಸಿ ಯಾವ ನಿರ್ಧಾರ ಕೈಗೊಂಡರೂ, ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *