ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಹೊಸ ದಾಳ

Public TV
1 Min Read

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಂದರ್ಭದಲ್ಲಿ ತಮ್ಮ ನಿರೀಕ್ಷೆಯಂತೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬುಧವಾರ ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಳೆಯ ವಿಶ್ವಾಸದಲ್ಲಿ ರಾಹುಲ್ ಗಾಂಧಿ ಮನವೊಲಿಸಬಹುದು ಅಂದುಕೊಂಡಿದ್ದ ಸಿದ್ದರಾಮಯ್ಯಗೆ ಅಲ್ಲಿ ಕೂಡ ನಿರಾಸೆಯಾಗಿದೆ. ಸಿದ್ದರಾಮಯ್ಯ ಏನೇ ಹೇಳಿದರು ಎಲ್ಲವನ್ನೂ ಸೋನಿಯಾ ಗಾಂಧಿ ಗಮನಕ್ಕೆ ತರುತ್ತೇನೆ. ಅವರ ನಿರ್ಧಾರವೇ ಅಂತಿಮ ಎಂದಿದ್ದಾರೆ.

ಆಗ ಹೊಸ ದಾಳ ಉರುಳಿಸಿದ ಸಿದ್ದರಾಮಯ್ಯ, ನನಗೆ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ಹಾಗೂ ವಿಪಕ್ಷ ನಾಯಕನ ಸ್ಥಾನ ಯಾವುದೂ ಬೇಡ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮಾತ್ರ ನಮ್ಮವರಿಗೆ ಕೊಡಿ ಎಂದು ತಮ್ಮ ಬೇಡಿಕೆಯನ್ನು ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. ಪಕ್ಷ ನನಗೆ 5 ವರ್ಷ ಮುಖ್ಯಮಂತ್ರಿ ಮಾಡಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಜವಬ್ದಾರಿ. ನಾನು ಹೇಳಿದವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ. ಮುಂದಿನದ್ದು ನನ್ನ ಜವಬ್ದಾರಿ ಎಂದಿದ್ದಾರೆ. ಆ ಮೂಲಕ ತಮ್ಮ ಬೆಂಬಲಿಗರನ್ನ ಕೆಪಿಸಿಸಿ ಪಟ್ಟಕ್ಕೆ ತಂದು ಪಕ್ಷವನ್ನ ಪರೋಕ್ಷವಾಗಿ ತಾವೇ ಹಿಡಿತಕ್ಕೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ.

ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಸಿಎಂ ಹಾದಿ ಸುಗಮ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ. ಎಲ್ಲವನ್ನೂ ಕೇಳಿಸಿಕೊಂಡ ರಾಹುಲ್ ಗಾಂಧಿ, ಇದನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯಿಂದಲೂ ಯಾವುದೇ ಖಚಿತ ಭರವಸೆ ಸಿಗದಿದ್ದರಿಂದ ಬೇಸರಗೊಂಡ ಸಿದ್ದರಾಮಯ್ಯ ನಿರಾಸೆಯಿಂದ ವಾಪಸ್ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *