ಆಸ್ಕರ್ ಕನಸು ಚಿಗುರಿಸಿದಳು `ರಂಗನಾಯಕಿ’!

Public TV
1 Min Read

ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಸಿನಿಮಾ ಬಿಡುಗಡೆಯಾಗಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ. ಹೀಗೆ ಬಿಡುಗಡೆಯ ದಿನ ಹತ್ತಿರವಾಗುತ್ತಿರುವುದರಿಂದ ನಿರ್ದೇಶಕ ದಯಾಳ್ ಪತ್ರಿಕಾಗೋಷ್ಠಿ ಕರೆದು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಂಗನಾಯಕಿಗೆ ಸಿಗುತ್ತಿರೋ ಜನ ಬೆಂಬಲ, ಅದು ಮೂಡಿ ಬಂದ ರೀತಿಯ ಬಗ್ಗೆ ಮಾತಾಡುತ್ತಲೇ ದಯಾಳ್ ಆಸ್ಕರ್ ಪ್ರಶಸ್ತಿಯ ಬಗ್ಗೆಯೂ ಕನಸು ಬಿತ್ತುವಂತಹ ಮಾತಾಡಿದ್ದಾರೆ. ಮುಂದೆ ಖಂಡಿತಾ ತಾನು ಕನ್ನಡಕ್ಕೊಂದು ಆಸ್ಕರ್ ಪ್ರಶಸ್ತಿ ತಂದು ಕೊಡೋದಾಗಿ ಭರವಸೆಯಿಂದಲೇ ಹೇಳಿಕೊಂಡಿದ್ದಾರೆ.

ಚಿತ್ರತಂಡದೊಂದಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ದಯಾಳ್ ಪದ್ಮನಾಭನ್, ರಂಗನಾಯಕಿಯ ಬಗ್ಗೆ ಮಾತಾಡುತ್ತಲೇ ಆಸ್ಕರ್ ಪ್ರಶಸ್ತಿಯ ಬಗ್ಗೆ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕವೇ ತಮ್ಮ ಮುಂದಿನ ಚಿತ್ರದ ತಯಾರಿಯ ಬಗ್ಗೆಯೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಯೂನಿವರ್ಸಲ್ ಕಥೆಯೊಂದನ್ನು ಸಿದ್ಧಪಡಿಸುತ್ತಿರೋದಾಗಿ ಹೇಳಿರುವ ದಯಾಳ್, ಆ ಮೂಲಕವೇ ಕನ್ನಡಕ್ಕೆ ಖಂಡಿತಾ ಒಂದು ಆಸ್ಕರ್ ಪ್ರಶಸ್ತಿ ತಂದು ಕೊಡೋ ಭರವಸೆ ಹೊಂದಿದ್ದಾರೆ. ಅಂದಹಾಗೆ ಈ ಕಥೆ ಈಗಾಗಲೇ ಶೇ.50 ರಷ್ಟು ಕಂಪ್ಲೀಟ್ ಆಗಿದೆಯಂತೆ.

ಒಂದು ಸಿನಿಮಾ ಅಚ್ಚುಕಟ್ಟಾಗಿ ಮುಗಿದು ಬಿಡುಗಡೆಯ ಹಂತ ತಲುಪೋ ಹೊತ್ತಿಗೆಲ್ಲ ಮತ್ತೊಂದು ಕಥೆಗೆ ಕಾವು ಕೊಡುವುದು ದಯಾಳ್ ಪದ್ಮನಾಭನ್ ಅವರ ಸ್ಪೆಷಾಲಿಟಿ. ರಂಗನಾಯಕಿ ಕೂಡ ಹಾಗೆಯೇ ರೆಡಿಯಾದ ಕಥೆ. ಹೀಗೆ ದಯಾಳ್ ರಂಗನಾಯಕಿ ಪ್ರೆಸ್‍ಮೀಟಲ್ಲಿ ಆಸ್ಕರ್ ಕನಸು ಚಿಗುರಿಸೋ ಮಾತಾಡಲು ಕನಸು ತುಂಬಿದ್ದು ಕೂಡ ರಂಗನಾಯಕಿಯೇ ಎಂಬುದು ವಿಶೇಷ. ಈ ಚಿತ್ರ ಈಗಾಗಲೇ ಗೋವಾ ಫಿಲಂ ಫೆಸ್ಟಿವಲ್‍ಗೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಗೊಂಡಿದೆ. ಅದುವೇ ದಯಾಳ್ ಪಾಲಿಗೆ ಹೊಸ ಶಕ್ತಿ ತುಂಬಿದಂತಿದೆ. ಭಾರೀ ಗೆಲುವು ಕಾಣೋ ಸೂಚನೆ ಹೊಂದಿರೋ ರಂಗನಾಯಕಿ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಅದರ ಬೆನ್ನಲ್ಲಿಯೇ ದಯಾಳ್ ಆಸ್ಕರ್ ಕನಸಿನ ಹೊಸ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *