ಜಿಹಾದಿ ಗ್ಯಾಂಗ್ ಹೆಸರಲ್ಲಿ ಜಮೀನು ಖರೀದಿಗೆ ಮುಂದಾಗಿದ್ದ ಶಂಕಿತ ಉಗ್ರರು!

Public TV
2 Min Read

– ಇಬ್ಬರು ಶಂಕಿತ ಉಗ್ರರು ತಮಿಳುನಾಡು ಪೊಲೀಸರಿಗೆ ಹಸ್ತಾಂತರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯರ ಬಂಧನ ಪ್ರಕರಣದಿಂದ ಒಂದೊಂದೆ ಸತ್ಯಾಂಶಗಳು ಹೊರ ಬರುವುದಕ್ಕೆ ಶುರುವಾಗಿವೆ. ಇಡೀ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ದ ಜಿಹಾದಿ ಗ್ಯಾಂಗ್ ಸದಸ್ಯರಿಗೆ ಭರ್ಜರಿ ಟಾಸ್ಕ್ ನೀಡಲಾಗುತ್ತಿತ್ತು ಎನ್ನಲಾಗಿದೆ.

ಜಿಹಾದಿಗಳು ವ್ಯವಸ್ಥಿತ ಜಾಲ ಹೆಣೆಯಲು ಪಕ್ಕಾ ಪ್ಲ್ಯಾನ್ ಮಾಡಿದ್ದರು. ಮತ್ತೊಂದು ಆಘಾತಕಾರಿ ವಿಚಾರವೆಂದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಟ್ರೈನಿಂಗ್ ಕ್ಯಾಂಪ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಜಿಹಾದಿ ಗ್ಯಾಂಗ್ ಸದಸ್ಯರಿಗೆ ಅಲ್ಲಿಯೇ ಶಸ್ತ್ರಾಸ್ತ್ರ ತರಬೇತಿಗೆ ಪ್ಲ್ಯಾನ್ ರೂಪಿಸಲಾಗಿತ್ತು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಸದ್ದುಗುಂಟೆಪಾಳ್ಯದಲ್ಲಿದ್ದ ಶಂಕಿತ ಉಗ್ರ ಮೆಹಬೂಬ್ ಪಾಷಾ ಸ್ಥಾಪಿಸಿದ್ದ ಟ್ರಸ್ಟ್ ಹೆಸರಿನಲ್ಲಿ ಜಮೀನು ಖರೀದಿಗೆ ಯತ್ನ ನಡೆದಿತ್ತು. ರಾಜ್ಯದ ಐಸಿಎ ಸಂಘಟನೆ ಮುಖ್ಯಸ್ಥ ಮೆಹಬೂಬ್ ಪಾಷಾ ಮೂಲಕ ಮನ್ಸೂರ್ ಖಾನ್‍ಗೆ ಜಮೀನು ಖರೀದಿಸುವ ಟಾಸ್ಕ್ ನೀಡಲಾಗಿತ್ತು. ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ಗುಂಡ್ಲುಪೇಟೆಯಲ್ಲಿ ವಶಕ್ಕೆ ಪಡೆದಿದ್ದರು. ಅಲ್ಲದೆ ದೆಹಲಿಯಲ್ಲಿ ಬಂಧಿತನಾಗಿದ್ದ ಖಾಜಾ ಮೊಯಿದ್ದೀನ್ ಜಿಹಾದಿ ಸದಸ್ಯರ ಮುಖ್ಯಸ್ಥನ ಸೂಚನೆಯಂತೆ ಎಲ್ಲವೂ ನಡೆಯುತ್ತಿತ್ತು. ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮನೆಯಲ್ಲಿ ಪಿಸ್ತೂಲ್, ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಶಂಕಿತ ಉಗ್ರರು:
ಉಡುಪಿಯಲ್ಲಿ ಮಂಗಳವಾರ ಸೆರೆಸಿಕ್ಕ ಇಬ್ಬರು ಶಂಕಿತ ಉಗ್ರರಾದ ಅಬ್ದುಲ್ ಶಮೀಮ್ ಮತ್ತು ತೌಫಿಕ್‍ನನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ವಿಲ್ಸನ್ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳ ಬಂಧನಕ್ಕಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಪೊಲೀಸರು ತೀವ್ರ ಶೋಧ ನಡೆಸಿದ್ದರು.

ಉಗ್ರರ ಚಟುವಟಿಕೆ ಶಂಕೆ ಹಿನ್ನೆಲೆ ತಮಿಳುನಾಡು ಕೇರಳ ಗಡಿಯ ಕಲಿಯಿಕ್ಕಾವಿಲ ಚೆಕ್‍ಪೋಸ್ಟ್ ನಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿತ್ತು. ಇದೇ ಮಾರ್ಗವಾಗಿ ಜನವರಿ 8ರ ರಾತ್ರಿ ಮಹೀಂದ್ರ ಸ್ಕಾರ್ಪಿಯೋದಲ್ಲಿ ಬಂದಿದ್ದ ಇಬ್ಬರು ಶಂಕಿತ ಉಗ್ರರು ವಿಲ್ಸನ್ ಅವರನ್ನು ಹತ್ಯೆಗೈದು ಪರಾರಿ ಆಗಿದ್ದರು. ಸದ್ಯ ಈ ಪ್ರಕರಣದ ತನಿಖೆ ನಡೆಸುತ್ತಿರುವ ತಮಿಳುನಾಡು ಕ್ಯೂ ಬ್ರಾಂಚ್ ಪೊಲೀಸರು, ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *