ಜನನಿಬಿಡ ಪ್ರದೇಶದಲ್ಲೇ ಪತ್ನಿಗೆ ಚಾಕು ಇರಿದ ಪಾಪಿ ಪತಿ

Public TV
1 Min Read

ನೆಲಮಂಗಲ: ಪಾಪಿ ಪತಿಯೊಬ್ಬ ಜನನಿಬಿಡ ಪ್ರದೇಶದಲ್ಲೇ ಪತ್ನಿಗೆ ಚಾಕು ಇರಿದು ಪರಾರಿಯಾದ ಅಮಾನವೀಯ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಸೋಲೂರಿನಲ್ಲಿ ನಡೆದಿದೆ.

ತಿಮ್ಮರಾಜು ಜಾಕು ಇರಿದ ಪಾಪಿ ಪತಿ. ಸೌಮ್ಯಾ ಹಲ್ಲೆಗೆ ಒಳಗಾದ ಪತ್ನಿ. ಅದೃಷ್ಟವಶಾತ್ ಸೌಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೌಮ್ಯಾ ಎಂದಿನಂತೆ ಬುಧವಾರವೂ ಟಿವಿಎಸ್ ಶೋರೂಂನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಶೋರೂಂ ಬಳಿ ಕಾದು ಕುಳಿತಿದ್ದ ತಿಮ್ಮರಾಜು ಪತ್ನಿಯ ಬಳಿಗೆ ಬಂದು ಜಗಳ ಆರಂಭಿಸಿದ್ದಾನೆ. ನಂತರ ಗಲಾಟೆ ಮಾಡಿಕೊಂಡು ಕುತ್ತಿಗೆಗೆ ಚಾಕು ಇರಿದಿದ್ದಾನೆ. ಸೌಮ್ಯಾ ಜೋರಾಗಿ ಚೀರಿದ ಧ್ವನಿ ಕೇಳಿ ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದ ಸೌಮ್ಯಾ ಅವರನ್ನು ಸ್ಥಳೀಯರು ಸೋಲೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ತಿಮ್ಮರಾಜು ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುದೂರು ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *