ತಮಿಳುನಾಡಿನ ಡೆಂಕನಿಕೋಟೆಯಲ್ಲಿ ಬೆಂಗ್ಳೂರು ರೌಡಿಶೀಟರ್ ಬರ್ಬರ ಕೊಲೆ

Public TV
1 Min Read

– ಮಂಕಿ ಕ್ಯಾಪ್ ಹಾಕಿಕೊಂಡು ಕೃತ್ಯ ಎಸಗಿದ ದುಷ್ಕರ್ಮಿಗಳು

ಬೆಂಗಳೂರು: ಸಿಲಿಕಾನ್ ಸಿಟಿಯ ರೌಡಿಯೊಬ್ಬನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಡೆಂಕನಿಕೋಟೆಯಲ್ಲಿ ನಡೆದಿದೆ.

ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯ ಇಸ್ಮಾಯಿಲ್ (30) ಕೊಲೆಯಾದ ರೌಡಿ. ಇಸ್ಮಾಯಿಲ್ ವಿರುದ್ಧ ಬೊಮ್ಮನಹಳ್ಳಿ ಬಂಡೆಪಾಳ್ಯ ಹಾಗೂ ಮಡಿವಾಳ ಪೋಲಿಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ದಾಖಲಾಗಿವೆ.

ಆಗಿದ್ದೇನು?:
ಇಸ್ಮಾಯಿಲ್ ತಮಿಳುನಾಡಿನ ಡೆಂಕಣಿಕೋಟೆಯ ತನ್ನ ಸ್ನೇಹಿತ ಬಶೀರ್ ಮನೆಗೆ ಇಂದು ತೆರಳಿದ್ದ. ಈ ವೇಳೆ ಆತನನ್ನು ಹಿಂಬಾಲಿಸಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ಬಶೀರ್ ಮನೆಯಲ್ಲೇ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ವೇಳೆ ಬಶೀರ್ ಮನೆಯಲ್ಲಿದ್ದ ಮಹಿಳೆಯರು ಗಾಂಬರಿಗೊಂಡು ಮನೆ ಬಿಟ್ಟು ಹೊರಗೆ ಹೋಗಿದ್ದಾರೆ. ದುಷ್ಕರ್ಮಿಗಳು ಮಂಕಿ ಕ್ಯಾಪ್ ಹಾಕಿಕೊಂಡಿದ್ದರು. ಹೀಗಾಗಿ ಕೊಲೆ ಮಾಡಿದವರು ಯಾರು ಎನ್ನುವುದು ಮನೆಯಲ್ಲಿದ್ದವರಿಗೆ ತಿಳಿದಿಲ್ಲ. ಕೊಲೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಸ್ಥಳದಲ್ಲಿದ್ದ ಮಹಿಳೆಯರು ತಿಳಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇಸ್ಮಾಯಿಲ್ ಕೊಲೆಗೆ ಕಳೆದ ಕೆಲವು ದಿನಗಳಿಂದ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಹೀಗಾಗಿ ಇಂದು ಆತನನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳದಲ್ಲೇ ಲಾಂಗ್ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡೆಂಕಣಿಕೋಟೆ ಪೊಲೀಸರು, ಸ್ಥಳವನ್ನು ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಸ್ಮಾಯಿಲ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *