ಎಣ್ಣೆ ಅಮಲಿನಲ್ಲಿ ಗಲಾಟೆ ಮಾಡ್ತಿದ್ದ ರೌಡಿಶೀಟರ್ ಬರ್ಬರ ಹತ್ಯೆ

Public TV
1 Min Read

ಬೆಂಗಳೂರು: ಮದ್ಯದ ಅಮಲಿನಲ್ಲಿ ದಿನನಿತ್ಯವೂ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಬರ್ಬರ ಹತ್ಯೆಗೈದ ಘಟನೆ ನಗರದಲ್ಲಿ ನಡೆದಿದೆ.

ಕೆಜಿ ಹಳ್ಳಿಯ ಕಾರ್ಪೋರೇಟಿವ್ ಕ್ವಾಟ್ರಸ್ ನಿವಾಸಿ ಸ್ಟೀಫನ್ ರಾಜ್ (40) ಕೊಲೆಯಾದ ರೌಡಿಶೀಟರ್. ಸ್ಟೀಫನ್ ರಾಜ್ ಕುಡಿದ ಅಮಲಿನಲ್ಲಿ ನಿತ್ಯವೂ ಸ್ಥಳೀಯರ ಜೊತೆ ಗಲಾಟೆ ಮಾಡುತ್ತಿದ್ದ. ಹೀಗಾಗಿ ಮಹೇಂದ್ರ ಅಂಡ್ ಟೀಂ ಕೊಲೆ ಮಾಡಿದೆ.

ಸ್ಟೀಫನ್ ರಾಜ್ ಸ್ನೇಹಿತರಾದ ಕಿರಣ್ ಹಾಗೂ ಮುಗೇಂದ್ರ ಜೊತೆಗೆ ಬುಧವಾರ ತಡರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ. ಆದರೆ ಮನೆಗೆ ಹೋಗದೆ ಪತ್ನಿಗೆ ಕರೆ ಮಾಡಿ, ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದ್ದ. ಇತ್ತ ಭಾವನಿಗೆ ಕರೆ ಮಾಡಿ, ಆಟೋವನ್ನು ತೆಗೆದುಕೊಂಡು ಹೋಗಿದ್ದ. ಈ ವೇಳೆ ಮಹೇಂದ್ರ ಅಂಡ್ ಟೀಂ ಆಟೋವನ್ನು ತಡೆದು ಹಲ್ಲೆ ಮಾಡಿದ್ದಾರೆ.

ಮಹೇಂದ್ರ ಅಂಡ್ ಟೀಂನಿಂದ ತಪ್ಪಿಸಿಕೊಂಡ ಕಿರಣ್ ಹಾಗೂ ಮುಗೇಂದ್ರ ಸ್ಟೀಫನ್ ಪತ್ನಿಯ ಮನೆಗೆ ಬಂದಿದ್ದರು. ಆಗ ನಮ್ಮ ಪತಿ ಎಲ್ಲಿದ್ದಾರೆ ಎಂದು ಸ್ಟೀಫನ್ ಪತ್ನಿ ವಿಚಾರಿಸಿದ್ದಾಳೆ. ಇಬ್ಬರಿಂದಲೂ ಯಾವುದೇ ಉತ್ತರ ಸಿಗದಿದ್ದಾಗ ಪೊಲೀಸ್ ಕರೆ ಮಾಡುವುದಾಗಿ ಹೆದರಿಸಿದ್ದಾಳೆ. ಸ್ಟೀಫನ್ ಪತ್ನಿ ಮಾತಿನಿಂದ ಗಾಬರಿಗೊಂಡ ಕಿರಣ್ ಹಾಗೂ ಮುಗೇಂದ್ರ ಅಲ್ಲಿಂದ ಪರಾರಿಯಾಗಿದ್ದಾರೆ.

ಸ್ಟೀಫನ್‍ಗಾಗಿ ಹುಡುಕಾಟ ನಡೆಸಿದಾಗ ಗುರುವಾರ ಬೆಳಗ್ಗೆ 3 ಗಂಟೆಯ ಸುಮಾರಿಗೆ ಆಟೋದಲ್ಲಿ ಶವ ಪತ್ತೆಯಾಗಿದೆ. ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಹಲ್ಲೆ ಮಾಡಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಟೀಫನ್ ಪ್ರಾಣಬಿಟ್ಟಿದ್ದಾನೆ. ಆರೋಪಿಗಳು ಹಾಗೂ ಸ್ಟೀಫನ್ ರಾಜ್ ಸ್ನೇಹಿತರಾದ ಕಿರಣ್, ಮುಗೇಂದ್ರ ತಲೆಮರೆಸಿಕೊಂಡಿದ್ದಾರೆ.

ಈ ಸಂಬಂಧ ಕೆಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *