ಶ್ರೀಮಂತರ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಕಲ್ಕೆರೆ ಮಂಜ ಅರೆಸ್ಟ್

Public TV
1 Min Read

ಬೆಂಗಳೂರು: ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಲ್ಕೆರೆ ಮಂಜ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಬಾಗಲೂರು ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನವಾಗಿದೆ.

ಹಲವು ಪ್ರಕರಣಗಳಲ್ಲಿ ಜೈಲು ಸೇರಿ ಬಿಡುಗಡೆಯಾದರೂ ಕೃತ್ಯ ಬಿಡದ ಆಸಾಮಿ, ಕಳೆದ ಎರಡು ತಿಂಗಳ ಹಿಂದಷ್ಟೇ ಬಾಗಲೂರಿನ ಏರಿಯಾವೊಂದರಲ್ಲಿ ಮನೆಕಳ್ಳತನ ಮಾಡಿದ್ದ. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕಂದರೆ ಆರೋಪಿ ಬಂಧನದಿಂದ ಮತ್ತೆ ಮೂರು ಪ್ರಕರಣಗಳು ಪತ್ತೆಯಾಗಿವೆ.

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿದ್ದ ಮೂರು ಮನೆಗಳ ಕಳ್ಳತನ ಪ್ರಕರಣಗಳು ಹೊರಬಂದಿವೆ. ಬಂಧಿತನಿಂದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ 900 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಾಗಿದೆ. ತಡರಾತ್ರಿ ಎಂಟ್ರಿ ಕೊಟ್ಟು ಕೃತ್ಯ ಎಸಗುತ್ತಿದ್ದ ಕಲ್ಕರೆ ಮಂಜ, ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ನಂತರ ಬೀಗ ಹಾಕಿದ ಮನೆಯನ್ನು ದೋಚಿ ಎಸ್ಕೇಪ್ ಅಗುತ್ತಿದ್ದ.

ಬೀಗ ಮುರಿದು ಎಂಟ್ರಿ ಕೊಟ್ಟು ಕೈಗೆ ಸಿಕ್ಕ ಚಿನ್ನಾಭರಣ ದೋಚುತ್ತಿದ್ದ. ಬಂಧಿತನ ವಿರುದ್ಧ 15 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಹಲವು ಬಾರಿ ಜೈಲು ಸೇರಿದ್ದರೂ ಸಹ ಜೈಲಿನಿಂದ ಬಿಡುಗಡೆ ಬಳಿಕವು ಕೃತ್ಯ ಮುಂದುವರಿಸಿ ಲಾಕ್ ಆಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *