ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್ ದಿನೇ ದಿನೇ ಮಂಕಾಗುತ್ತಿದೆ. ಪಕ್ಷದ ನಾಯಕರು ಆ್ಯಕ್ಟೀವ್ ಆಗಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೂ ಬರುತ್ತಿಲ್ಲ. ಪಕ್ಷ ಸಂಘಟನೆ ನಿಂತಿಲ್ಲೇ ನಿಂತಿದೆ. ಶಾಸಕರು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮೌನವಾಗಿದ್ದಾರೆ. ಇದೆಲ್ಲದರ ಮಧ್ಯೆ ತೆನೆ ಹೊತ್ತ ಮಹಿಳೆ ಪ್ರಬಲ ನಾಯಕನಿಲ್ಲದೆ ಮೌನವಾಗಿದ್ದಾಳೆ.

ಸೋತರು ಸದಾ ಪಕ್ಷ ಸಂಘಟನೆಯಲ್ಲಿ ಮುಂದಿರೋ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಅದ್ಯಾಕೋ ಪಕ್ಷದ ಸಂಘಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿರಂತೂ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದಿದ್ದಾರೆ. ಪಕ್ಷ ಇಂತಹ ಸಮಯದಲ್ಲಿ ಇದ್ದರು ಪ್ರವಾಸದ ಮೇಲೆ ಪ್ರವಾಸ ಮಾಡುತ್ತಿದ್ದಾರೆ.

ಹುಟ್ಟು ಹಬ್ಬಕ್ಕಾಗಿ ಗೋವಾಗಿ ಫ್ಯಾಮಿಲಿ ಜೊತೆ ಹೋಗಿದ್ರು. ಈಗ ಹೊಸ ವರ್ಷದ ಆಚರಣೆಗೆ ಸಿಂಗಾಪುರ್ ಗೆ ಹಾರಿದ್ದು, ಪಕ್ಷ ಸಂಘಟನೆಯನ್ನೆ ಮರೆತಿದ್ದಾರೆ. ಮಾಜಿ ಸಚಿವ ರೇವಣ್ಣಗೆ ಹಾಸನವೇ ರಾಜ್ಯದಂತೆ ಅಲ್ಲಿಗೆ ಮಾತ್ರ ಸಿಮೀತವಾಗಿದ್ದಾರೆ. ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಯುವ ಘಟಕದ ಅಧ್ಯಕ್ಷ ಆಗಿದ್ದರೂ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಯುವಕರನ್ನು ಆಕರ್ಷಣೆ ಮಾಡಿಲ್ಲ. ಕಾರ್ಯಕರ್ತರ ಜೊತೆಯೂ ಮಾತಾಡಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅಲ್ಲಿ-ಇಲ್ಲಿ ಒಮ್ಮೊಮ್ಮೆ ರಾಜಕೀಯವಾಗಿ ಕಾಣಿಸಿಕೊಳ್ಳುತ್ತಾರೆ. ಮಾಜಿ ಸಚಿವರಂತೂ ಪಕ್ಷದ ಕಚೇರಿಗೂ ಮುಖ ಹಾಕಿಲ್ಲ.

ಒಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಜೆಡಿಎಸ್, ವಿರೋಧ ಪಕ್ಷ ಅನ್ನೋದು ಮರೆತು ಕುಳಿತಿದೆ. ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ. ಜೆಡಿಎಸ್ ನಾಯಕರ ಈ ವರ್ತನೆ ನೋಡಿ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *