ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

Public TV
1 Min Read

ಬೆಂಗಳೂರು: ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಪೂಜಾ ಹತ್ಯೆ ಪ್ರಕರಣವನ್ನು ಬೆಂಗ್ಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪತ್ತೆಯಾದಾಗ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಬಾಗಲೂರು ಪೊಲೀಸರು ಕೊಲೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ಕರೆಗಳನ್ನು ಪರಿಶೀಲಿಸಿದ್ದಾರೆ. ಆಗ ಪೂಜಾ ಬಳಸುತ್ತಿದ್ದ ಫೋನ್ ನಂಬರ್ ಪತ್ತೆಯಾಗಿದೆ.

ಪೂಜಾಳ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಆಕೆಯ ದೇಹದ ಗುರುತು ಬೇಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮೊದಲು ಪೊಲೀಸರು ಪೂಜಾಳ ಪತಿ ಸೌದೀಪ್ ದೇಗೆ ಫೋಟೋ ಕಳುಹಿಸಿದ್ದರು. ಆಗ ಸೌದೀಪ್ ತನ್ನ ಪತ್ನಿಯ ದೇಹವನ್ನು ಗುರುತಿಸಿರಲಿಲ್ಲ. ಬಳಿಕ ಸೌದೀಪ್ ತನ್ನ ಪತ್ನಿಯ ದೇಹದ ಮೇಲಿದ್ದ ಟ್ಯಾಟೂ ನೋಡಿ ನನ್ನ ಪತ್ನಿ ಪೂಜಾ ಸಿಂಗ್ ದೇ ಎಂದು ಗುರುತಿಸಿದ್ದರು.

ಬಾಗಲೂರು ಪೊಲೀಸರು ಯಾವುದೇ ಸುಳಿವು ಇಲ್ಲದಿದ್ದರೂ ಕೇವಲ ಟ್ಯಾಟೂ ಮೇಲೆ ಪ್ರಕರಣ ಭೇದಿಸಿದ್ದಾರೆ. ಆರೋಪಿ ನಾಗೇಶ್ ಹತ್ಯೆ ವೇಳೆ ಪೂಜಾಸಿಂಗ್ ಗೆ 15 ರಿಂದ 20 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಆಗಿದ್ದೇನು?
ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ ಮೆಂಟ್ ಮಾಡುತ್ತಿದ್ದರು. ಜುಲೈ 30ರಂದು ಕೆಲಸಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದಳು. ಹೀಗೆ ಬಂದವಳು ಕೆಲಸ ಮುಗಿಸಿ ಓಲಾ ಕ್ಯಾಬ್ ಮಾಡಿಕೊಂಡು ತಾನು ಉಳಿದುಕೊಂಡಿದ್ದ ಪರಪ್ಪನ ಆಗ್ರಹಾರ ಹೋಟೆಲಿಗೆ ಹೋಗಿದ್ದಾಳೆ. ಮಾರನೇ ದಿನ ಮುಂಜಾನೆ ನಾಲ್ಕು ಗಂಟೆಗೆ ತೆರಳಬೇಕಿದೆ. ಹಾಗಾಗಿ ಅದೇ ಕ್ಯಾಬ್ ಚಾಲಕನಿಗೆ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೇಳಿದ್ದಾಳೆ. ನಾಗೇಶ್ ಬೆಳಗ್ಗೆ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಈಕೆಯ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು ಆಕೆಯನ್ನು ಕೊಲೆ ಮಾಡಿದ್ದಾನೆ.

ಹಣದ ಆಸೆಗೆ ಬಿದ್ದು ಕೊಲೆ ಮಾಡಿದ ನಾಗೇಶನಿಗೆ ಕೇವಲ 500 ರೂ. ಹಾಗೂ ಎರಡು ಮೊಬೈಲ್ ಸಿಕ್ಕಿದೆ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *