ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್ – ಮಚ್ಚಿನಿಂದ ಕೊಚ್ಚಿ ಕೊಲೆಗೈದವ ತಿಂದ ಗುಂಡೇಟು

Public TV
1 Min Read

ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ರೌಡಿಶೀಟರ್ ಯೂನಿಸ್ ಗುಂಡೇಟು ತಿಂದ ಕೊಲೆ ಆರೋಪಿ. ಕೊಲೆಯಾಗಿದ್ದ ಭಟ್ಟಿ ಅಮ್ಚಾದ್ ಮತ್ತು ಯೂನಿಸ್ ಗ್ಯಾಂಗ್ ನಡುವೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಗಾಗ ಕೊಲೆಯತ್ನಗಳು, ಹೊಡೆದಾಟಗಳು ನಡೆಯುತ್ತಿದ್ದವು. ಕಳೆದ ಭಾನುವಾರ ಅಂಗಡಿಯಲ್ಲಿದ್ದ ಭಟ್ಟಿ ಅಮ್ಚಾದ್ ಮೇಲೆ ಯೂನಿಸ್ ಗ್ಯಾಂಗ್‍ನ ಏಳೆಂಟು ಜನ ಏಕಾಏಕಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ, ಅಟ್ಟಾಡಿಸಿಕೊಂಡು ಹೋಗಿ ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿ.ಜೆ ಹಳ್ಳಿ ಪೊಲೀಸರು, ಪ್ರಮುಖ ಆರೋಪಿ ಯೂನಿಸ್‍ನನ್ನು ಬಂಧಿಸಿ, ಇಂದು ಮುಂಜಾನೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೇದೆ ಆನಂದ್ ಮೇಲೆ ಆರೋಪಿ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಡಿ.ಜೆ ಹಳ್ಳಿ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ರೌಡಿಶೀಟರ್ ಯೂನಿಸ್ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *