ಬೆಂಗಳೂರು: ಕೊನೆಗಳಿಗೆಯಲ್ಲಿ ಲೇಟೆಸ್ಟ್ ಎಂಟ್ರಿಗೆ ಮುಂದಾಗಿದ್ದಾರೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್. ಪಟ್ಟಕ್ಕೆ ನಾನು ರೆಡಿ ಆದರೆ ಕಂಡೀಷನ್ ಅಪ್ಲೈ ಅಂತ ಹೊಸ ಷರತ್ತಿನೊಂದಿಗೆ ಮಾಜಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೈಕಮಾಂಡ್ ಅಂಗಳಕ್ಕೆ ಚೆಂಡು ರವಾನಿಸಿದ್ದಾರೆ.
ಇದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿಯ ಹೊಸ ತಿರುವಿನ ಇಂಟರೆಸ್ಟಿಂಗ್ ಕಹಾನಿ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಪಾಲಾಗುತ್ತಾ? ಇಲ್ಲಾ ಸಿದ್ದರಾಮಯ್ಯ ಬೆಂಬಲಿಗರ ಪಾಲಾಗುತ್ತಾ ಎನ್ನುವ ಕುತೂಹಲದ ನಡುವೆಯೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಲೇಟೆಸ್ಟ್ ಎಂಟ್ರಿ ಕೊಟ್ಟಿದ್ದಾರೆ.
ಕೆಪಿಸಿಸಿ ಪಟ್ಟದ ಗೊಂದಲದಲ್ಲಿರುವ ಹೈಕಮಾಂಡ್ ಮುಂದೆ ಸಂಕಷ್ಟದ ಈ ಸಂದರ್ಭದಲ್ಲಿ ಪಕ್ಷದ ನೇತೃತ್ವ ವಹಿಸಿಕೊಳ್ಳಲು ನಾನು ರೆಡಿ ಅಂದಿದ್ದಾರೆ. 8 ವರ್ಷಗಳ ಕಾಲ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಪರಮೇಶ್ವರ್ ಇನ್ನೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಆದರೆ ಒಂದು ಷರತ್ತಿನ ಮೇಲೆ ಕೆಪಿಸಿಸಿ ಪಟ್ಟಕ್ಕೆ ಬರಲು ಪರಮೇಶ್ವರ್ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ. ಈಗ ಅಧ್ಯಕ್ಷರಾದರೆ ಕನಿಷ್ಟ 3 ವರ್ಷ ಮುಂದುವರಿಸಬೇಕು ಎನ್ನುವುದು ಪರಮೇಶ್ವರ್ ಷರತ್ತು. ಅಂದರೆ ಮುಂದಿನ ವಿಧಾನಸಭಾ ಚುನಾವಣೆಗೂ ಪರಮೇಶ್ವರ್ ನೇತೃತ್ವ ಇರಬೇಕು ಎನ್ನುವ ಷರತ್ತಿನೊಂದಿಗೆ ಕೆಪಿಸಿಸಿ ಪಟ್ಟಕ್ಕೆ ಬರಲು ಪರಮೇಶ್ವರ್ ಮುಂದಾಗಿದ್ದಾರೆ. 8 ವರ್ಷಗಳ ಕಾಲ ಸುದೀರ್ಘ ಅಧ್ಯಕ್ಷರಾಗಿದ್ದ ಪರಮೇಶ್ವರ್ ಇನ್ನೊಂದು ಸುತ್ತು ಪಕ್ಷ ಮುನ್ನಡೆಸಲು ಮುಂದಾಗಿದ್ದಾರೆ. ಆದರೆ ಹೈ ಕಮಾಂಡ್ ಇದಕ್ಕೆ ಮಣೆ ಹಾಕುತ್ತಾ ಎನ್ನುವುದು ಸದ್ಯದ ಕುತೂಹಲ.