ಗುರುವಾರ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ ಗಡ್ಕರಿ – ಬಿಜೆಪಿ ನಾಯಕರ ನಡುವೆ ನಾಮಕರಣ ಜಟಾಪಟಿ

Public TV
2 Min Read

ಮಂಡ್ಯ: ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ (Bengaluru-Mysuru Expressway) ಕಾಮಗಾರಿ ಇದೀಗ ಅಂತ್ಯಕ್ಕೆ ಬಂದಿದೆ. ಕಂಪ್ಲೀಟ್ ಆಗಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ನಾಳೆ ಆಗಮಿಸಲಿದ್ದಾರೆ. ಈ ಹೊತ್ತಿನಲ್ಲೇ ಇದೀಗ ಈ ಹೆದ್ದಾರಿಗೆ ಯಾವ ಹೆಸರು ಇಡಬೇಕೆಂದು ಬಿಜೆಪಿ (BJP) ನಾಯಕರಲ್ಲಿ ಪತ್ರದ ಜಟಾಪಟಿಯೂ ಸಹ ಎದ್ದಿದೆ.

ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತು ಸಾಂಸ್ಕೃತಿಕ ನಗರಿ ಮೈಸೂರು (Mysuru) ನಡುವೆ ವಾಹನ ಸಂಚಾರ ಸುಗಮ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ವಾಹನ ಸಂಚಾರಕ್ಕೆ ಸಂಪೂರ್ಣ ರಸ್ತೆಯನ್ನು ಅನುವು ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಈ ಕಾಮಗಾರಿ 88% ನಷ್ಟು ಮುಕ್ತಾಯಗೊಂಡಿದ್ದು ಇನ್ನೂ ಕೇವಲ 12%ರಷ್ಟು ಕಾಮಗಾರಿ ಮಾತ್ರ ಬಾಕಿ ಇದೆ. ಈಗಾಗಲೇ ಬೆಂಗಳೂರಿನ ಕೆಂಗೇರಿಯಿಂದ ಮಂಡ್ಯ ನಗರದ ಗಡಿಯವರೆಗೆ ಈ ಕಾಮಗಾರಿ ಬಹುತೇಕ ಕಂಪ್ಲೀಟ್ ಆಗಿದ್ದು, ಮಂಡ್ಯದಿಂದ ಮೈಸೂರುವರೆಗೆ ಭರದಿಂದ ಹೆದ್ದಾರಿ ಕಾಮಗಾರಿಯ ಕೆಲಸ ನಡೆಯುತ್ತಿದೆ. ಹೀಗಾಗಿ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಾಳೆ ದಶಪಥ ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದನ್ನೂ ಓದಿ: ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

ವೈಮಾನಿಕ ಸಮೀಕ್ಷೆಯ ಮೂಲಕ ಹೆದ್ದಾರಿ ಕಾಮಗಾರಿಯನ್ನು ಗಡ್ಕರಿ ಅವರು ವೀಕ್ಷಣೆ ಮಾಡಲಿದ್ದಾರೆ. ನಂತರ ರಸ್ತೆಯಲ್ಲಿ ಸಂಚಾರ ಮಾಡುವ ಮೂಲಕ ಹೆದ್ದಾರಿ ಕಾಮಗಾರಿಯ ಗುಣಮಟ್ಟವನ್ನು ಸಹ ಪರಿಶೀಲನೆ ನಡೆಸಲಿದ್ದಾರೆ. ಇನ್ನೂ ಬಾಕಿ ಉಳಿದಿರುವ ಕಾಮಗಾರಿಯನ್ನು ಎಷ್ಟು ದಿನಗಳ ಒಳಗೆ ಕಂಪ್ಲೀಟ್ ಆಗಬಹುದು ಎಂದು ಮಾಹಿತಿಯನ್ನು ಸಹ ತೆಗೆದುಕೊಳ್ಳಲಿದ್ದಾರೆ. ಆದಷ್ಟು ಬೇಗ ಗುಣಮಟ್ಟದ ಮೂಲಕ ಕಾಮಗಾರಿಯನ್ನು ಈ ತಿಂಗಳಾಂತ್ಯದ ಒಳಗೆ ಮುಕ್ತಾಯ ಮಾಡುವಂತೆ ಅವರು ತಾಕೀತು ಮಾಡುವ ಸಾಧ್ಯತೆ ಇದೆ. ಇದಲ್ಲದೇ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಇತರ ಜನ ಪ್ರತಿನಿಧಿಗಳು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಇದೆ ಎಂದು ಬರೆದಿರುವ ಪತ್ರದ ಬಗ್ಗೆಯೂ ಪರಿಶೀಲನೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ – ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಶ್

ಒಂದು ಕಡೆ ನಾಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ವೀಕ್ಷಣೆ ಮಾಡಲು ಬಂದ್ರೆ, ಇನ್ನೊಂದೆಡೆ ಈ ರಸ್ತೆಗೆ ಯಾವ ಹೆಸರು ಇಡಬೇಕೆಂಬ ಪರ, ವಿರೋಧಗಳ ಚರ್ಚೆ ನಡೆಯುತ್ತಿದೆ. ಈಗಾಗಲೇ ಸಂಸದ ಪ್ರತಾಪ್ ಸಿಂಹ ಈ ಹೆದ್ದಾರಿಗೆ ಕಾವೇರಿ ಎಕ್ಸ್‌ಪ್ರೆಸ್‌ ವೇ ಎಂದು ಹೆಸರಿಡಲು ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ರು. ಇದೀದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಕ್ಸ್‌ಪ್ರೆಸ್‌ ಹೈವೇ ಎಂದು ನಾಮಕರಣ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಇದಕ್ಕೆ ಎಂಎಲ್‍ಸಿ ದಿನೇಶ್ ಗೂಳಿಗೌಡ ಧ್ವನಿ ಗೂಡಿಸಿದ್ದಾರೆ.

ಒಟ್ಟಾರೆ ಮುಂಬರುವ ಚುನಾವಣೆ ಉದ್ದೇಶವನ್ನಿಟ್ಟುಕೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುವ ಉದ್ದೇಶದಿಂದ ನಿತಿನ್ ಗಡ್ಕರಿ ಕಾಮಗಾರಿ ಪರಿಶೀಲನೆಗೆ ಬರುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *