ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾತ್ರಿ ಭಾಷಣ ಮಾಡಿ ಇಡೀ ದೇಶವನ್ನು ಲಾಕ್ ಡೌನ್ ಮಾಡುವಂತೆ ಆದೇಶಿಸಿದ್ದಾರೆ. ಆದರೂ ಕೇಳದ ಜನ ಇಂದು ಕೂಡ ಹೊರ ಬರಲಾರಂಭಿಸಿದ್ದಾರೆ. ಇಲ್ಲದ- ಸಲ್ಲದ ನೆಪಗಳನ್ನು ಹೇಳಿಕೊಂಡು ಮನೆಯಿಂದ ಹೊರಬರುತ್ತಿದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಹೌದು. ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಜನರು ಹೊಸ ಹೊಸ ಟ್ರಿಕ್ಸ್ ಬಳಕೆ ಮಾಡುತ್ತಿದ್ದಾರೆ. ಸಾವಿಗೆ ಹೋಗುತ್ತಾ ಇದ್ದೀವಿ. ನಮ್ಮ ತಾತ ತೀರ್ಕೊಂಡಿದ್ದಾರೆ. ಅಜ್ಜಿಗೆ ತುಂಬಾ ಸಿರಿಯಸ್ ಇದೆ. ಮನೇಲಿ ನೀರಿಲ್ಲ ಎಂದು ಖಾಲಿ ಕ್ಯಾನ್ ಇಡ್ಕೊಂಡು ಲಗೇಜ್ ಸಮೇತ ಬೈಕಿನಲ್ಲಿ ಟ್ರಾವೆಲ್ ಮಾಡುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೆ ಹಳೇ ಮೆಡಿಕಲ್ ಚೀಟಿ ಇಡ್ಕೊಂಡು ಮಾತ್ರೆ ತರೋಕೆ ಬಂದ್ವಿ. ಇಲ್ಲೇ ಪಕ್ಕದಲ್ಲೇ ಮನೆ. ಮನೇಲಿ ರೇಷನ್ ಇಲ್ಲ ಅಂತ ಕುಂಟು ನೆಪಗಳನ್ನು ಹೇಳಿಕೊಂಡು ಮೈಸೂರು ರೋಡ್ ನಲ್ಲಿ ಊರುಗಳಿಗೆ ತೆರಳುತ್ತಿದ್ದಾರೆ. ಸಾವಿಗೆ ಹೋಗ್ತಾ ಇದ್ದೀವಿ ಅಂತ ಬೆಳಗ್ಗಿನಿಂದ 200ಕ್ಕೂ ಹೆಚ್ಚು ಜನ ಹೇಳಿ ಹೋಗಿದ್ದಾರೆ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಮೈಸೂರು ರೋಡ್ ಸಂಪೂರ್ಣ ಲಾಕ್ ಡೌನ್ ಆಗಿದ್ದು, ವಾಹನ ಸವಾರರನ್ನು ತಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಅನಾವಶ್ಯಕವಾಗಿ ರೋಡಿಗಿಳಿಯುವ ವಾಹನ ಸವಾರರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಮೈಸೂರು ರಸ್ತೆ ಯ ನಾಯಂಡಹಳ್ಳಿ, ಕೆಂಗೇರಿ, ನೈಸ್ ರೋಡ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದು, ಮಾಹನ ಸವಾರರು ಪೊಲೀಸರನ್ನು ಕಂಡು ದೂರದಲ್ಲೇ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿಗೆ ಯಾರಿಗೂ ಎಂಟ್ರಿ ಇಲ್ಲವಾಗಿದ್ದು, ನೈಸ್ ರಸ್ತೆಯ ಬಳಿಯೇ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.