ಐದು ದುಬಾರಿ ಕಾರುಗಳಿಗೆ ಬೆಂಕಿ ಇಟ್ಟು ಸ್ವಲ್ಪ ಹೊತ್ತಿನ ಬಳಿಕ ಏನಾಯ್ತು ಅಂತ ಬಂದ!

Public TV
1 Min Read

– ಸಿಸಿಟಿವಿ ಕ್ಯಾಮೆರಾ ದೃಶ್ಯದಿಂದ ಸಿಕ್ಕಿಬಿದ್ದ ಆರೋಪಿ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಮಂಜುನಾಥನಗರದಲ್ಲಿ ನಡೆದಿದೆ.

ಮಂಜುನಾಥನಗರದ ನಿವಾಸಿ ರಾಜೇಂದ್ರ ಪ್ರಸಾದ್ (45) ಎಂದು ತಿಳಿದು ಬೆಂಕಿ ಹಚ್ಚಿದ ಆರೋಪಿ. ಮಧ್ಯರಾತ್ರಿ ಕುಡಿದೋ ಅಥವಾ ಗಾಂಜಾ ಹೊಡೆದೋ ಬಂದ ರಾಜೇಂದ್ರ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಸಾಲಾಗಿ ಬೆಂಕಿ ಹಚ್ಚಿ ಹೋಗಿದ್ದಾನೆ. ಆರೋಪಿಯು ಫಾರ್ಚೂನರ್, ರೆಡ್ ಬಾಕ್ಸ್ ಎರ್ಟಿಗಾ ಸೇರಿದಂತೆ ಒಟ್ಟು ಐದು ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ.

ಕಾರುಗಳು ಹೊತ್ತಿ ಉರಿಯುವುದನ್ನು ನೋಡಿದ ಕೆಲ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಜನರು ಹಾಗೂ ಪೊಲೀಸರು ಸೇರಿದ ಬಳಿಕ ಬೆಂಕಿ ಇಟ್ಟ ಆಸಾಮಿ ರಾಜೇಂದ್ರ ನಿಧಾನವಾಗಿ ಘಟನಾ ಸ್ಥಳಕ್ಕೆ ಸ್ಪಾಟ್‍ಗೆ ಬಂದಿದ್ದ. ಈ ವೇಳೆ ಅಲ್ಲಿದ್ದ ಪೊಲೀಸರಿಗೆ ಸರ್ ಏನಾಯ್ತು ಅಂತ ಪ್ರಶ್ನೆ ಮಾಡಿದ್ದ.

ಈ ಭೂಪನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದ್ದನ್ನು ನೋಡಿದ್ದ ಸ್ಥಳೀಯರು ರಾಜೇಂದ್ರನನ್ನು ಕಂಡು, ಸರ್ ಇವನೇ ಬೆಂಕಿ ಹಚ್ಚಿದ್ದು ಎಂದು ಪೊಲೀಸರಿಗೆ ದೂರಿದರು. ತಕ್ಷಣವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬೆಂಕಿ ಹಚ್ಚಿದ್ದು ಇದೇ ಕಿಡಿಗೇಡಿ ಅಂತ ಗೊತ್ತಾಗುತ್ತಿದ್ದಂತೆ ಕಾರು ಮಾಲೀಕರು ಆಕ್ರೋಶಗೊಂಡು ರಾಜೇಂದ್ರಗೆ ಗೂಸಾ ಕೊಟ್ಟಿದ್ದಾರೆ. ಇತ್ತ ಪೊಲೀಸರು ಮಾಲೀಕರನ್ನು ಸಮಾಧಾಪಡಿಸಲು ಹರಸಾಹಸ ಪಟ್ಟರು.

ಬಸವೇಶ್ವರನಗರ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜೇಂದ್ರ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಅದೇ ನ ಮಂಜುನಾಥನಗರದ ನಿವಾಸಿಯಾಗಿದ್ದು, ಕುಡಿದ ಮತ್ತಿನಲ್ಲಿ ಬೆಂಕಿ ಹಚ್ಚಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *