ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಇತ್ತೀಚೆಗಷ್ಟೇ ಹೈದರಾಬಾದಿಗೆ ಶಿಫ್ಟ್ ಆಗಿತ್ತು. ಅಲ್ಲಿನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಹೈವೋಲ್ಟೋಜ್ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ಪ್ಲ್ಯಾನು ಮಾಡಿಕೊಂಡಿತ್ತು. ಅದರ ಪ್ರಕಾರವಾಗಿಯೇ ಸರಾಗವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಬೆಂಗಳೂರಿಗೆ ವಾಪಾಸ್ಸಾಗಿದೆ. ಇದರ ಮುಖ್ಯ ಭಾಗವಾಗಿರೋ ಫೈಟ್ ಸೀನುಗಳಲ್ಲಿ ನಟಿಸಿ ಆಯಾಸಗೊಂಡಿರೋ ಯಶ್ ಸಣ್ಣದಾಗಿ ರಿಲ್ಯಾಕ್ಸ್ ತೆಗೆದುಕೊಂಡು ಇನ್ನುಮುಂದೆ ಕರ್ನಾಟಕದಲ್ಲಿಯೇ ಚಿತ್ರೀಕರಣ ಮುಂದುವರೆಯಲಿದೆಯಂತೆ.
ಹೈದರಾಬಾದಿನಲ್ಲಿ ನಡೆಯಲಿರುವ ಚಿತ್ರೀಕರಣ ಯಶ್ ಅಭಿಮಾನಿಗಳೆಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಯಾಕೆಂದರೆ, ಅಲ್ಲಿ ನಡೆಯಲಿದ್ದದ್ದು ಅಧೀರ ಮತ್ತು ರಾಕಿ ಭಾಯ್ ನಡುವಿನ ರಣ ಕದನದ ಚಿತ್ರೀಕರಣ. ಅಧೀರ ಎಂಬ ಪಾತ್ರವನ್ನು ಸಂಜಯ್ ದತ್ ನಿರ್ವಹಿಸುತ್ತಿರೋದೇ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅದೆಲ್ಲವೂ ಈಗ ಸುಸೂತ್ರವಾಗಿ ಚಿತ್ರೀಕರಣ ನಡೆದಿದೆ. ಅದೇ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನತ್ತ ಮರಳಿದೆ.
ಅಧೀರ ಮತ್ತು ರಾಕಿಭಾಯ್ ಫೈಟ್ ಸೀನುಗಳ ಚಿತ್ರೀಕರಣ ನಡೆಯಲಿದೆ ಎಂಬ ಸುದ್ದಿ ಹಬ್ಬಿಕೊಂಡಿತ್ತಲ್ಲಾ? ಆ ಕ್ಷಣದಿಂದಲೇ ಯಶ್ ಅಭಿಮಾನಿಗಳಲ್ಲಿ ಒಂದು ಆಸೆ ಚಿಗುರೊಡೆದುಕೊಂಡಿತ್ತು. ಕುತೂಹಲ ಹುಟ್ಟಿಸಲಿಕ್ಕಾದರೂ ಈ ಸೀನುಗಳ ಒಂದೆರಡು ಫೋಟೋಗಳಾದರೂ ನೋಡಲು ಸಿಗಬಹುದೇನೋ ಎಂಬ ಆಸೆ ಅವರಲ್ಲಿತ್ತು. ಆದರೆ ಚಿತ್ರತಂಡ ಮಾತ್ರ ಈ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾಗಿಯೇ ನಡೆದುಕೊಂಡಿದೆ. ಇಡೀ ಚಿತ್ರೀಕರಣದ ಬಗ್ಗೆ ಯಾವ ಸುಳಿವೂ ಸಿಗದಂತೆ ಜಾಗ್ರತೆ ವಹಿಸಿದೆ. ಇನ್ನು ಮುಂದೆ ಇದರ ಚಿತ್ರೀಕರಣ ಕರ್ನಾಟಕದಲ್ಲಿಯೇ ಮುಂದುವರೆಯಲಿದೆಯಂತೆ.