ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ಸಜ್ಜಾದ ಸಿಎಂ – ಜನ್ಮದಿನದಂದೇ ವಿಶೇಷ ಪೂಜೆ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ತಯಾರಿ ಆರಂಭಿಸಿದ್ದಾರೆ. ಸದ್ಯ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ವಾಸವಿರುವ ಸಿಎಂ ಬಿಎಸ್‍ವೈ ಸದ್ಯದಲ್ಲೇ ಕಾವೇರಿ ನಿವಾಸಕ್ಕೆ ಅಧಿಕೃತವಾಗಿ ಸ್ಥಳಾಂತರವಾಗಲಿದ್ದಾರೆ.

ಈಗಾಗಲೇ ಕಳೆದ ಕೆಲವು ದಿನಗಳಿಂದ ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ನವೀಕರಣ ಕಾರ್ಯವನ್ನು ಬೇಗನೇ ಮುಗಿಸಲು ಡಿಪಿಎಆರ್ ಇಲಾಖೆ ಸಿಬ್ಬಂದಿಗೆ ಸೂಚಿಸಿರುವ ಸಿಎಂ ಯಡಿಯೂರಪ್ಪ, ಎಷ್ಟು ಬೇಗ ನವೀಕರಣ ಮುಗಿಯುತ್ತೋ ಅಷ್ಟು ಬೇಗ ಕಾವೇರಿ ನಿವಾಸಕ್ಕೆ ಶಿಫ್ಟಾಗಲು ನಿರ್ಧರಿಸಿದ್ದಾರೆ.

ಯುಗಾದಿಗೂ ಮುನ್ನ ಸಿಎಂ ಯಡಿಯೂರಪ್ಪ ಧವಳಗಿರಿ ನಿವಾಸದಿಂದ ಕಾವೇರಿ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಲಿದ್ದಾರೆ. ಸಾಧ್ಯವಾದರೆ ಮಾರ್ಚ್ 5 ರಂದು ಬಜೆಟ್ ಪುಸ್ತಕವನ್ನು ಕಾವೇರಿ ನಿವಾಸದಿಂದಲೇ ಕೊಡೊಯ್ಯುವ ಕುರಿತು ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿಯೇ ಶನಿವಾರ ಪ್ರಥಮ ಬಾರಿಗೆ ಸಿಎಂ ಯಡಿಯೂರಪ್ಪ ಯಾರಿಗೂ ಹೇಳದೇ ಕಾವೇರಿ ನಿವಾಸಕ್ಕೆ ತೆರಳಿ ನವೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ್ದರು.

ಕಾವೇರಿಯಲ್ಲಿ ವಿಶೇಷ ಪೂಜೆ
ಇದೇ ಫೆಬ್ರವರಿ 27 ರಂದು ಸಿಎಂ ಯಡಿಯೂರಪ್ಪ ಅವರು 77 ವಸಂತಗಳನ್ನು ಪೂರೈಸಿ 78ಕ್ಕೆ ಕಾಲಿಡಲಿದ್ದಾರೆ. ತಮ್ಮ ಜನ್ಮದಿನದಂದೇ ಸಿಎಂ ಯಡಿಯೂರಪ್ಪ ಕಾವೇರಿ ಸರ್ಕಾರಿ ನಿವಾಸದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಹಮ್ಮಿಕೊಂಡಿದ್ದಾರೆ. ಬಿಎಸ್‍ವೈ ತಮ್ಮ ಕುಟುಂಬದ ಸದಸ್ಯರ ಜೊತೆ ಅಂದು ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *