ಕರ್ನಾಟಕದಲ್ಲಿ ಐದಕ್ಕೆ ಏರಿದ ಕೇಸ್- ಸೌದಿಯಿಂದ ಬಂದ ಮತ್ತಿಬ್ಬರಿಗೂ ಕೊರೊನಾ ಶಂಕೆ

Public TV
1 Min Read

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ದೃಢಪಟ್ಟ ಪ್ರಕರಣ ಐದಕ್ಕೆ ಏರಿಕೆ ಆಗಿದೆ. ಗ್ರೀಸ್‍ನಿಂದ ಬಂದ ಮುಂಬೈ ಮೂಲದ 26 ವರ್ಷದ ವ್ಯಕ್ತಿಗೆ ಬೆಂಗಳೂರಿನ ಜಯನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

15 ದಿನಗಳ ಹಿಂದೆಯಷ್ಟೇ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ 45 ವರ್ಷದ ವ್ಯಕ್ತಿಗೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇವರು ಚಿಕ್ಕಮಗಳೂರಲ್ಲಿರುವ ತಮ್ಮ ತಂಗಿ ಮನೆಗೆ ಬಂದಿದ್ದರು.

ದುಬೈನಿಂದ ಬಂದಿದ್ದ ಮತ್ತೋರ್ವ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಬೆಂಗಳೂರಿಗೆ ಹೊರಟ್ಟಿದ್ದ ಇವರು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಡಿಕೇರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರು. ಆಗ ಜ್ವರ ಇರುವುದು ಕಂಡುಬಂತು.

ಮರಣಮೃದಂಗಕ್ಕೆ ಸಾಕ್ಷಿ ಆಗಿರುವ ಇಟಲಿಯಲ್ಲಿ ಸಿಲುಕಿಕೊಂಡಿರುವ 80 ಮಂದಿ ಕನ್ನಡಿಗರು ಸೇರಿ 500 ಮಂದಿ ಭಾರತೀಯರನ್ನು ಸದ್ಯಕ್ಕೆ ಕರೆತರುವ ಸಾಧ್ಯತೆ ಕಡಿಮೆ. ಒಂದು ವೇಳೆ ಅಲ್ಲಿಂದ ಬರಬೇಕಾದ್ರೆ ಕೊರೊನಾ ನೆಗೆಟಿವ್ ಪ್ರಮಾಣಪತ್ರ ಪಡೆಯೋದು ಕಡ್ಡಾಯ ಎಂದು ಇಟಲಿಯಲ್ಲಿರುವ ಭಾರತದ ರಾಯಭಾರಿ ಕಚೇರಿ ಸ್ಪಷ್ಟಪಡಿಸಿದೆ. ಈ ಸಂಬಂಧ ದಾಖಲೆ ಸಲ್ಲಿಸುವಂತೆ ಸೂಚಿಸಿದೆ. ಇದನ್ನೂ ಓದಿ: ಭಾರತದಲ್ಲಿ ಕೊರೊನಾಗೆ ಕರ್ನಾಟಕದಲ್ಲಿ ಮೊದಲ ಬಲಿ

ಗುರುವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಸದ್ಯ ವಿದೇಶದಲ್ಲಿರೋರು ಭಾರತೀಯರು ವಿದೇಶದಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಸಿಕ್ಕ ಬಳಿಕ ಭಾರತಕ್ಕೆ ಬರುವಂತೆಯೂ ಮತ್ತು ಭಾರತಕ್ಕೆ ಬಂದ ಬಳಿಕ 14 ದಿನಗಳ ಮಟ್ಟಿಗೆ ಕಡ್ಡಾಯವಾಗಿ ಮನೆಯಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *