ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

By
2 Min Read

ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 2ನೇ ದಿನದ ಕಂಬಳ (Kambala) ನಡೆಯುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಮತ್ತೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿ ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇಂದು ಮಧ್ಯಾಹ್ನ ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿಯ ವತಿಯಿಂದ ಸನ್ಮಾನ ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನೆರವೇರಲಿದೆ.

ಅತ್ತ ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್ ಮಂಗಳೂರು ಕಾಮಿಡಿ ಕಲಾವಿದರಿಂದ ಪ್ರದರ್ಶನ, ಮಿಮಿಕ್ರಿ, ಮಂಕಾಳಿ ನಲಿಕೆ ಇರಲಿದೆ.

ಇಂದು ಸಂಜೆ 7 ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ರಸ ಸಂಜೆ ಬಳಿಕ ಇಂದು ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ ಇರಲಿದೆ. ಅದಾದ ನಂತರ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಕೂಡ ಸಂಗೀತ ಪ್ರೋಗ್ರಾಂ ಇರಲಿದೆ.

ನಿನ್ನೆ ಬೆಂಗಳೂರು ಕಂಬಳ (Bengaluru Kambala) ಮೊದಲ ದಿನದ ಕಲರವ ಮಧ್ಯರಾತ್ರಿಯವರೆಗೂ ನಡೆದಿದೆ. ಕೋಣಗಳ ಓಟ ಸ್ಫರ್ಧೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಉತ್ಸುಕರಾಗಿ ಕಂಬಳ ನೋಡಲು ಜನರು ಆಗಮಿಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

ನಿನ್ನೆ ಪ್ರಾರಂಭವಾದ ಕಂಬಳ ಕೋಣಗಳ ಓಟದ ಸ್ಪರ್ಧೆ ಮುಂಜಾನೆಯವರೆಗೂ ಮುಂದುವರಿದಿದೆ. ರಾಜ ಕರೆ, ಮಹಾರಾಜಕರೆಯಲ್ಲಿ ಮಿಂಚಿನ ಓಟದಲ್ಲಿ ಕಂಬಳ ಕೋಣಗಳು ಓಡಿವೆ. ಮಧ್ಯರಾತ್ರಿಯವರೆಗೂ ಕಂಬಳ ಅಭಿಮಾನಿಗಳು ಕಿಕ್ಕಿರಿದಿದ್ದರು. ಮುಂಜಾನೆಯಲ್ಲಿ ಅಭಿಮಾನಿಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತು.

ಇದುವರೆಗೆ ಜ್ಯೂನಿಯರ್ ಕೋಣಗಳ 2 ಸುತ್ತಿನ ಕಂಬಳ ಓಟ ಮುಕ್ತಾಯವಾಗಿದೆ. 175 ಕೋಣಗಳು ಈ ಜ್ಯೂನಿಯರ್ ಕಂಬಳ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಇದೀಗ ಜ್ಯೂನಿಯರ್ ಫ್ರೀ ಕ್ವಾಟರ್ ಫೈನಲ್ ಕಂಬಳ ಓಟ ನಡೆಯಲಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

Share This Article