ಜೆಎನ್‍ಸಿಯಲ್ಲಿ ಪೌರತ್ವದ ಕಿಚ್ಚು- ಪ್ರಕರಣಕ್ಕೆ ರಾಜಕೀಯ ಬಣ್ಣ

Public TV
2 Min Read

ಬೆಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆಯ ಪರವಾಗಿ ಸಹಿ ಸಂಗ್ರಹ ಮಾಡಲು ಹೋಗಿ ಗೋಜಿಗೆ ಸಿಲುಕಿರುವ ಬಿಜೆಪಿ ತಮ್ಮ ವಾದವನ್ನು ಮಂಡಿಸುತ್ತಿದೆ. ಆದರೆ ಈಗ ಜ್ಯೋತಿ ನಿವಾಸ್ ಕಾಲೇಜು ಗಲಾಟೆಗೆ ರಾಜಕೀಯ ಲೇಪ ಮೆತ್ತುತ್ತಿದ್ದು, ಕಾಲೇಜಿನ ಕ್ಯಾಂಪಸ್ ಒಳಗೆ ರಾಜಕೀಯ ಮಾಡುತ್ತಿದ್ದಾರೆ.

ಜ್ಯೋತಿ ನಿವಾಸ್ ಕಾಲೇಜಿನ ಗಲಾಟೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕೆಸರು ಎರೆಚಾಟ ಮಾಡಿಕೊಂಡಿವೆ. ಕಾಂಗ್ರೆಸ್ ಇದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಕಾಲೇಜಿನಲ್ಲಿ ಪೌರತ್ವದ ವಿಷ ಬೀಜ ಬಿತ್ತುತ್ತಿದೆ ಅಂತ ಪ್ರತ್ಯಾರೋಪ ಮಾಡಿದ್ದಾರೆ.

ಈ ಆರೋಪ ಪ್ರತ್ಯಾರೋಪದ ನಡುವೆ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಇಂದು ಮೌನ ಪ್ರತಿಭಟನೆಯೂ ನಡೆಯಿತು. ಕಾಲೇಜಿನ ಒತ್ತಾಯಪೂರ್ವಕವಾಗಿ ತಮ್ಮ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರುತ್ತಾ ಇದ್ದಾರೆ ಅಂತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಗೋ ಬ್ಯಾಕ್ ಪಾಕಿಸ್ತಾನ ಘೋಷಣೆ:
ಮಹಿಳಾ ಕಾಲೇಜ್ ಜ್ಯೋತಿ ನಿವಾಸ್ ಬಳಿ ಸಿಎಎ ಪರ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜು ಗೋಡೆಗೆ ಬ್ಯಾನರ್ ಹಾಕಿದ್ದನ್ನು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದಾಗ ಗೋ ಬ್ಯಾಕ್ ಪಾಕಿಸ್ತಾನ ತರಹದ ಘೋಷಣೆಗಳನ್ನ ಬಿಜೆಪಿ ಕಾರ್ಯಕರ್ತರು ಕೂಗಿದ್ದಾರೆ. ಕಾಲೇಜು ಬಳಿ ಬಿಜೆಪಿ ಮುಖಂಡರು ಹಾಗೂ ವಿದ್ಯಾರ್ಥಿನಿಯರ ಮಧ್ಯೆ ನಡೆದ ವಾಗ್ವಾದ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕೆಲ ಬಿಜೆಪಿ ಮುಖಂಡರು ಸಿಎಎ, ಎನ್‌ಆರ್‌ಸಿ ಪರ ಬ್ಯಾನರ್ ಗಳನ್ನು ಕಾಲೇಜು ಗೋಡೆ ಮೇಲೆ ಹಾಕಿ ಬಲವಂತವಾಗಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದರಂತೆ. ಈ ವೇಳೆ ವಿದ್ಯಾರ್ಥಿನಿಯರು ಹಾಗೂ ಬಿಜೆಪಿ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಗೋ ಬ್ಯಾಕ್ ಪಾಕಿಸ್ತಾನ ಎನ್ನುವ ಪದ ವಿದ್ಯಾರ್ಥಿನಿಯರು ರೊಚ್ಚಿಗೇಳುವಂತೆ ಮಾಡಿತು. ಬುಧವಾರ ನಡೆದ ಘಟನೆ ಖಂಡಿಸಿ ಇಂದು ಕಾಲೇಜ್‍ನಲ್ಲಿ ವಿದ್ಯಾರ್ಥಿನಿಯರು ನೋ ಸಿಎಎ, ನೋ ಎನ್‌ಆರ್‌ಸಿ ಅಂತ ಪ್ರತಿಭಟಿಸಿದರು.

ಈ ಕುರಿತು ಪ್ರತಿಕ್ರಿಯಿ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಸ್ಥಳೀಯ ಪೊಲೀಸರು ಎಲ್ಲವನ್ನೂ ನೋಡಿ ಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ವಿದ್ಯಾರ್ಥಿನಿಯರು ಸುಮ್ಮನೆ ಗಲಾಟೆ ಸೃಷ್ಟಿಸಿದ್ದಾರೆ. ಸಿಎಎ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ಸಲುವಾಗಿ ಕಾಲೇಜ್ ಬಳಿ ನಮ್ಮ ಕಾರ್ಯಕರ್ತರು ಹೋಗಿದ್ದರು. ವಿದ್ಯಾರ್ಥಿನಿಯರು ಸ್ವಲ್ಪ ಸಮಾಧಾನವಾಗಿ ಕೇಳಬೇಕಿತ್ತು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *