ಹೆಚ್‍ಡಿಕೆಯ ಬಿಜೆಪಿ ಮೇಲಿನ ಸಾಫ್ಟ್ ಕಾರ್ನರ್ ಹಿಂದಿದೆ ರಾಜಕೀಯ ಲೆಕ್ಕಾಚಾರ!

Public TV
1 Min Read

ಬೆಂಗಳೂರು: ಬಿಜೆಪಿ ಸರ್ಕಾರ ಬೀಳಿಸಲ್ಲ ಅನ್ನೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಆ ಲೆಕ್ಕಾಚಾರದಿಂದಲೇ ಹೆಚ್‍ಡಿಕೆಯವರು ಬಿಜೆಪಿಗೆ ಬೆಂಬಲ ಎಂದು ಹೇಳುತ್ತಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಜೊತೆ ದೋಸ್ತಿ ಕೈ ಸುಟ್ಟ ಮೇಲೆ ಎಚ್‍ಡಿಕೆಗೆ ಜ್ಞಾನೋದಯವಾಗಿದೆ ಎಂದು ಹೆಚ್‍ಡಿಕೆ ರಾಜಕೀಯ ನಡೆ ಬಗ್ಗೆ ಜೆಡಿಎಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಮಾಜಿ ಸಿಎಂ ಅವರ ಈ ಹೇಳಿಕೆ ಜೆಡಿಎಸ್ ಗೆ ವರವಾಗುತ್ತದೆ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಹೆಚ್‍ಡಿಕೆ ಲೆಕ್ಕಾಚಾರವೇನು?
ಆಪರೇಷನ್ ಕಮಲದಿಂದ ಪಕ್ಷವನ್ನು ಪಾರು ಮಾಡುವುದು. ಬಿಜೆಪಿಗೆ ಜಿಗಿಯಲು ಸಜ್ಜಾಗಿರೋ ಶಾಸಕರನ್ನು ಉಳಿಸಿಕೊಳ್ಳುವುದು. ಸಾಫ್ಟ್ ಕಾರ್ನರ್ ತೋರಿಸಿದರೆ ಆಪರೇಷನ್‍ಗೆ ಬಿಜೆಪಿ ಕೈ ಹಾಕಲ್ಲ ಅನ್ನೋ ನಂಬಿಕೆ ಹಾಗೂ ತಮ್ಮ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಕೊಡಿಸೋದು ಹೆಚ್‍ಡಿಕೆ ಲೆಕ್ಕಾಚಾರವಾಗಿದೆ.

ತಮ್ಮ ವಿರುದ್ಧದ ಫೋನ್ ಟ್ಯಾಪಿಂಗ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ಬಿಜೆಪಿ ಮೇಲೆ ದಾಳಿ ಮಾಡಿದರೆ ಡಿಕೆಶಿ ಸ್ಥಿತಿ ಎದುರಾಗಬಹುದು. ಅಲ್ಲದೆ ಭವಿಷ್ಯದಲ್ಲಿ ರಾಜಕೀಯವಾಗಿ ಕಷ್ಟ ಆಗಬಹುದು ಅನ್ನೋ ಭಯಯ ಹೆಚ್‍ಡಿಕೆಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಾಫ್ಟ್ ಕಾರ್ನರ್ ತೋರಿಸಿದರೆ ಮುಂದೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಕೂಡ ಹೆಚ್‍ಡಿಕೆಯವರದ್ದಾಗಿದೆ.

ಕಾಂಗ್ರೆಸ್ ಕೈಕೊಟ್ಟ ಮೇಲೆ ಜೆಡಿಎಸ್ ಪರಿಸ್ಥಿತಿ ಕಷ್ಟವಾಗಿದೆ. ಹೀಗೆ ಮುಂದುವರಿದರೆ ಜೆಡಿಎಸ್ ಭವಿಷ್ಯಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಬಿಜೆಪಿ ಜೊತೆ ದೋಸ್ತಿಗೆ ಬಾಗಿಲು ಓಪನ್ ಮಾಡೋದು ಸೂಕ್ತ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುವುದು. ಈ ಮೂಲಕ ಕೇಂದ್ರ ಕಮಲ ನಾಯಕರ ಮನಸ್ಸು ಗೆಲ್ಲುವುದು. ಕಮಲ ಬೆಂಬಲಿಸಿ ಜೆಡಿಎಸ್ ಪಕ್ಷ ಉಳಿಸಿಕೊಳ್ಳೋದು ಹೆಚ್‍ಡಿಕೆ ಪ್ಲಾನ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *