‘ಕುಡಿದ ಮತ್ತಲ್ಲಿ ಹೊಡೆದಾಟ’- ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

Public TV
1 Min Read

ಬೆಂಗಳೂರು: ಬಿಡದಿ ರೆಸಾರ್ಟಿನಲ್ಲಿ ಬಾಟಲಿಯಿಂದ ಬಡಿದಾಡಿಕೊಂಡಿದ್ದ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಪ್ರಕರಣದ ದೋಷಾರೋಪ ಪಟ್ಟಿಯನ್ನು ಬಿಡದಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಗಲಾಟೆ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಮದ್ಯಪಾನ ಮಾಡಿದ್ದರು. ಅಲ್ಲದೆ ಮಾತಿನ ಚಕಮಕಿಯಿಂದ ಈ ಗಲಾಟೆ ಪ್ರಾರಂಭವಾಯಿತು. ಗಲಾಟೆಗೂ ಮುನ್ನ ಯಾವುದೇ ಸಂಚು ಮಾಡಿದ್ದಾಗಲಿ, ಹಲ್ಲೆ ಮಾಡುವ ಉದ್ದೇಶವಾಗಲಿ ಇರಲಿಲ್ಲ. ತಕ್ಷಣ ಪ್ರಚೋದನೆಯಿಂದ ಈ ಗಲಾಟೆ ನಡೆದಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ 41 ಸಾಕ್ಷ್ಯಗಳನ್ನು ಪರಿಗಣಿಸಿರುವ ಪೊಲೀಸರು ಆ ಸಂದರ್ಭ ಇಬ್ಬರ ಆರೋಗ್ಯ ವರದಿಗಳನ್ನು ಕೂಡ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಘಟನಾ ಸಂದರ್ಭದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ.

ಎನಿದು ಪ್ರಕರಣ?
ಈ ವರ್ಷದ ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದ್ದು, ಈಗ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *