ಮಿನಿಸ್ಟರ್ ಆಗ್ತಿದ್ದಂತೆ ರೌಡಿ ಬೋರ್ಡಿನಿಂದ ಗೋಪಾಲಯ್ಯನ ಫೋಟೋ ಔಟ್

Public TV
1 Min Read

ಬೆಂಗಳೂರು: ಮಿನಿಸ್ಟರ್ ಆಗುತ್ತಿದ್ದಂತೆ ರೌಡಿ ಬೋರ್ಡಿನಲ್ಲಿದ್ದ ಸಚಿವ ಗೋಪಾಲಯ್ಯನ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ.

ಹೌದು. ಎರಡು ಬಾರಿ ಶಾಸಕರಾಗಿ ಅವಧಿ ಪೂರ್ಣಗೊಳಿಸಿದರೂ ರೌಡಿಗಳ ಬೋರ್ಡಿನಿಂದ ಆಹಾರ ನಾಗರಿಕ ಪೂರೈಕೆ ಸಚಿವ ಕೆ ಗೋಪಾಲಯ್ಯ ಅವರ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದಿರಲಿಲ್ಲ. ಆದರೆ ಈಗ ಮಂತ್ರಿಯಾಗುತ್ತಿದ್ದಂತೆ ಅವರ ಫೋಟೋವನ್ನು ಅಲ್ಲಿಂದ ತೆಗೆದು ಹಾಕಲಾಗಿದೆ.

ಕಾಮಕ್ಷಿಪಾಳ್ಯದ ಮಾಜಿ ರೌಡಿ ಶೀಟರ್ ಆಗಿದ್ದ ಗೋಪಾಲಯ್ಯ ಸಿಸಿಬಿಯ ರೌಡಿ ಲಿಸ್ಟ್ ನಲ್ಲಿ ಇದ್ದರು. ಇಷ್ಟು ದಿನ ಅಲ್ಲೇ ಇದ್ದ ಫೋಟೋವನ್ನು ನಿನ್ನೆ ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗೋಪಾಲಯ್ಯ ಫೋಟೋ ಇತ್ತು. ಜೇಡರಹಳ್ಳಿ ಕೃಷ್ಣಪ್ಪ, ಮುಲಾಮ, ಹೆಬ್ಬೆಟ್ಟು ಮಂಜ, ಧರಣಿ ಮತ್ತು ಬಸವ, ರಾಮನ ಫೋಟೋ ಇರುವ ಲಿಸ್ಟ್‍ನಲ್ಲಿ ಗೋಪಾಲಯ್ಯನ ಫೋಟೋ ಇತ್ತು.

ಈಗ ಅವರ ಫೋಟೋವನ್ನು ತೆಗೆದು ಹಾಕಲಾಗಿದ್ದು, ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹಳೆ ಬೋರ್ಡ್ ಮತ್ತು ಹೊಸ ಎಡಿಟೆಡ್ ಬೋರ್ಡ್ ಎರಡೂ ಫೋಟೋಗಳು ಲಭ್ಯವಾಗಿದ್ದು, ಹೊಸ ಬೋರ್ಡ್ ನಲ್ಲಿ ಫೋಟೋ ಕಾಣಿಸುತ್ತಿಲ್ಲ. ಮುತ್ತಪ್ಪ ರೈ, ಅಗ್ನಿ ಶ್ರೀಧರ್, ಬಚ್ಚನ್ ಸೇರಿ ಹಲವರ ಫೋಟೋಗಳು ಇನ್ನೂ ಹಾಗೆ ಇವೆ. ಆದರೆ ಏಕಾಏಕಿ ಗೋಪಾಲಯ್ಯ ಫೋಟೋವನ್ನು ಕಣ್ಮರೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಈ ಬಗ್ಗೆ ಸ್ಪಷ್ಟನೆ ಕೊಡಬೇಕಾದ ಸಿಸಿಬಿ ಅಧಿಕಾರಿಗಳು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಸಿಸಿಬಿ ಗೋಡೆ ಮೇಲೆ ಇರುತ್ತಿದ್ದ ಫೋಟೋ ಇನ್ನು ಮಂದೆ ಎಲ್ ಇಡಿ ಟಿವಿಯಲ್ಲಿ ಕಾಣಿಸಿಕೊಳ್ಳಲಿವೆ. ರೌಡಿಗಳ ಫೋಟೋ ಟಿವಿ ಪರದೆಯಲ್ಲಿ ಡಿಸ್‍ಪ್ಲೇ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *